ಉಡುಪಿ | ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರ

ಉಡುಪಿ, ನ.16: ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ವತಿಯಿಂದ ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರವನ್ನು ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಹಾವಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗುರುರಾಜ ಕಾರ್ತಿಬೈಲು ಮಾತನಾಡಿ, ಈ ರೀತಿಯ ಕಾರ್ಯಾಗಾರ ನಮ್ಮ ಹಳ್ಳಿಯಲ್ಲಿ ನಡೆಯುತ್ತಿರುವುದು ನಮಗೊಂದು ಹೆಮ್ಮೆ. ಕಾವಿ ಕಲೆಯನ್ನು ಬೆಳೆಸಿ, ಗ್ರಾಮೋದ್ಯೋಗವನ್ನು ಸೃಜಿಸುವ ಡಾ.ಹಾವಂಜೆ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಮಣ್ಣಿನ ಉತ್ಪನ್ನಗಳು, ಬಟ್ಟೆ, ಮರ ಮೊದಲಾದ ವಿವಿಧ ಮಾಧ್ಯಮದಲ್ಲಿ ಕಾವಿ ಕಲೆಯ ವಿನ್ಯಾಸಗಳನ್ನು ಬೆಳೆಸುವ ಈ ಕಾರ್ಯಾಗಾರವು ಸುಮಾರು 25 ದಿನಗಳ ಕಾಲ ನಡೆಯಲಿದ್ದು, ಉಡುಪಿ ಭಾಗದ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಕಾವಿ ಕಲಾವಿದ ಡಾ.ಜನಾರ್ದನ ಹಾವಂಜೆ ತಿಳಿಸಿದರು.
ದೆಹಲಿಯ ವಿನ್ಯಾಸಗಾರ ಬ್ರಿಜೇಶ್ ಜೈಸ್ವಾಲ್ ಈ ಕಾರ್ಯಾಗಾರದಲ್ಲಿ ಕಲಾವಿದರು ವಿನ್ಯಾಸಗಳ ಬೆಳವಣಿಗೆಗೆ ಸಹಕರಿಸುವರಲ್ಲದೇ ವಿವಿಧ ಮಾಧ್ಯಮಗಳ ಮೇಲೆ ಇದರ ಬಳಕೆ ಸಾಧ್ಯತೆಯನ್ನು ಪ್ರಯೋಗಿಸಲಿದ್ದಾರೆ.
ಪುತ್ತೂರಿನ ಕುಂಬಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜನಾರ್ದನ ಮೂಲ್ಯ, ಕರಕುಶಲ ನಿಗಮದ ಎಚ್ಪಿಒ ಸುಪ್ರಿಯಾ ಭಾರದ್ವಾಜ್ ಹಾಗೂ ಕಾವಿ ಆರ್ಟ್ ಫೌಂಡೇಶನ್ನ ಮಂಜುನಾಥ ರಾವ್ ಉಪಸ್ಥಿತರಿದ್ದರು.







