ಉಡುಪಿ | ಸಮಾಜ ವಿಶೇಷ ಚೇತನರ ಕುರಿತಂತೆ ಸಂವೇದನೆ ಹೊಂದಿರಬೇಕು : ಸಿಇಒ ಪ್ರತೀಕ್ ಬಾಯಲ್

ಉಡುಪಿ, ಡಿ.3: ವಿಶೇಷ ಚೇತನರ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯಲ್ಲಿ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸುಗಮ್ಯ ಭಾರತ ಅಭಿಯಾನದಡಿ ಸಾರ್ವಜನಿಕ ಸಾರಿಗೆ, ಕಟ್ಟಡಗಳು ಮತ್ತು ಕಚೇರಿಗಳನ್ನು ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ. ವಿಶೇಷ ಚೇತನರನ್ನು ಒಳಗೊಂಡಿರುವ ಸಮಾಜವನ್ನು ನಿರ್ಮಿಸುವುದು ಸರಕಾರದ ಗುರಿಯಾಗಿದ್ದು, ಸಮಾಜ ಕೂಡಾ ವಿಶೇಷ ಚೇತನರ ಬಗ್ಗೆ ಸೂಕ್ಷ್ಮ ಸಂವೇದನೆ ಹೊಂದಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಅಜ್ಜರಕಾಡಿನ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಸಭಾಂಗಣದಲ್ಲಿ (ಪುರಭವನ) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಅಲ್ಲದೇ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ವಿಕಲಚೇತನರ ಸಂಘಟನೆಗಳು ಮತ್ತು ಪಾಲಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ವಿಕಲಚೇತನರ ನೋವು-ನಲಿವು, ಬೇಕು-ಬೇಡ ಮತ್ತು ಕಷ್ಟಗಳಿಗೆ ಸಮಾಜ ಸ್ಪಂದಿಸಬೇಕು. ಆಕಸ್ಮಿಕ ಅಪಘಾತಗಳಲ್ಲಿ ಅಂಗವೈಕಲ್ಯ ಹೊಂದಿ ಮಾನಸಿಕವಾಗಿ ಆಘಾತಗೊಂಡು ಕುಗ್ಗಿದವರಿಗೆ ಆಪ್ತ ಸಮಾಲೋಚನೆಯ ಅಗತ್ಯವಿದ್ದು, ಚೇತರಿಕೆಗೆ ಅವರ ಕುಟುಂಬದವರ ಜೊತೆ ಸಮಾಜವೂ ಸಹಕರಿಸಬೇಕು. ವಿಶೇಷ ಚೇತನರ ಜೊತೆ ಬಾಳ್ವೆ ಒಂದು ನಿರಂತರ ಕಲಿಕೆಯಾಗಿದ್ದು, ನಾವೆಲ್ಲರೂ ಇದರಲ್ಲಿ ಸಹಭಾಗಿಗಳಾಗಬೇಕು ಎಂದು ಪ್ರತಿಕ್ ಬಾಯಲ್ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಇತರರೊಂದಿಗೆ ಸರಿಸಮಾನವಾಗಿ ಬೆರೆತು ಜೀವನದಲ್ಲಿ ಮುಂದೆ ಬರಲು ಅನುಕೂಲವಾಗುವಂತೆ ಸಮಾಜದ ಪ್ರತಿಯೊಬ್ಬರೂ ಎಲ್ಲಾ ಕ್ಷೇತ್ರದಲ್ಲೂ ಅವರಿಗೆ ಪ್ರೋತ್ಸಾಹಿಸಿ ಅವಕಾಶ ಮಾಡಿಕೊಡಬೇಕು ಎಂದರು.
ವಿಶೇಷ ಚೇತನರು ಸಾಕಷ್ಟು ಸ್ವಾವಲಂಬಿಗಳಾಗಲಿ ಎಂದು ಸರಕಾರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಗಾಲಿ ಕುರ್ಚಿಗಳು, ಶ್ರವಣ ಸಾಧನಗಳು, ಯಂತ್ರಚಾಲಿತ ದ್ವಿಚಕ್ರ ವಾಹನಗಳು ಮತ್ತು ಇನ್ನಿತರ ಪರಿಕರಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 20 ವಿಕಲಚೇತನರ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇಂತಹ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಅಭಿನಂದನೆಗೆ ಅರ್ಹರು ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜಗಳನ್ನು ರೂಪಿಸುವುದು ಎನ್ನುವ ಘೋಷವಾಕ್ಯದೊಂದಿಗೆ ಈ ಬಾರಿಯ ವಿಶ್ವ ವಿಕಲಚೇತನರ ದಿನವನ್ನು ಆಚರಿಸಲಾಗುತ್ತಿದೆ. ಅಂಗವಿಕಲ ವ್ಯಕ್ತಿಗಳು ಇತರ ನಾಗರಿಕರಂತೆ ಸಮಾಜದ ಅಭಿನ್ನ ಅಂಗವಾಗಿ ಬದುಕಿ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಸಮಾನ ಪಾಲನ್ನು ಹೊಂದುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ವಿಶೇಷ ಚೇತನ ಪ್ರತಿಭೆಗಳಾದ ಪ್ರೀತಿ, ಪ್ರಥಮ್ ಜೋಶಿ, ಚಿರಾಗ್ ಪೈ, ಸಾಯಿದೀಪ್ ಶೆಟ್ಟಿ, ನಿರಂಜನ್ ಭಟ್ ಮುನ್ನೂರು, ಮಕ್ಬುಲ್ ಶೇಕ್, ಜಿ.ಸುರೇಶ ಆಚಾರ್ ಹಾಗೂ ಉಮೇಶ್ ಕುಂದರ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ವಿಶೇಷ ಶಾಲಾ ಮಕ್ಕಳು ಹಾಗೂ ವಿಕಲಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್, ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ಮತ್ತಿತರರು ಉಪಸ್ಥಿತರಿದ್ದರು.
ರೆಡ್ಕ್ರಾಸ್ ಕಾರ್ಯದರ್ಶಿ ಗಣನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಕಲಚೇತನ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ
ನಗರದ ಪುರಭವನದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಶಾಲಾ ಮಕ್ಕಳು ಸಿದ್ಧಪಡಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಕುಂದಾಪುರ ಶಾಸಕ ಕಿರಣ್ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಪ್ರದರ್ಶನದಲ್ಲಿ ಮಕ್ಕಳು ತಯಾರಿಸಿದ ವಿವಿಧ ವಸ್ತುಗಳು ಗಮನ ಸೆಳೆದವು.
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಇಂದು ವಿವಿಧ ಖಾಸಗಿ ಕಂಪನಿ ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಿಎಸ್ಆರ್ ನಿಧಿಯಿಂದ 27 ಮಂದಿ ವಿಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಶಾಸಕ ಯಶ್ಪಾಲ್ ಸುವರ್ಣ ವಿತರಿಸಿದರು.







