ಉಡುಪಿ | ಮನೆ, ದೇವಸ್ಥಾನದಲ್ಲಿ ಕಳವು ಪ್ರಕರಣ: ಶಿವಮೊಗ್ಗ ಮೂಲದ ಇಬ್ಬರು ಆರೋಪಿಗಳ ಬಂಧನ

ಕುಂದಾಪುರ: ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ನಡೆದ ವಾಸದ ಮನೆ ಕಳವು ಹಾಗೂ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಶಿಕಾರಿಪುರ ಮೂಲದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಪೊಲೀಸರ ತಂಡ ಬಂಧಿಸಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ರಾಕೇಶ್ ಹೆಚ್. (28) ನಂದೀಶ ಎಂ(24) ಎನ್ನುವರನ್ನು ಪತ್ತೆ ಮಾಡಿ ಹುಲಿಕಲ್ ಘಾಟ್ ಸಮೀಪ ಬಂಧಿಸಿದ್ದು ಅವರಿಂದ ಕಳ್ಳತನಗೈದ 1 ಲಕ್ಷ 19 ಸಾವಿರದ 720 ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
1ನೇ ಪ್ರಕರಣದ ವಿವರ: ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು ನೆಲ್ಲಿಗದ್ದೆ ಎಂಬಲ್ಲಿನ ಮನೆಯೊಂದರಲ್ಲಿ ಸೆ.4 ರಂದು ಮನೆಯವರು ಪ್ಯಾಕ್ಟರಿ ಕೆಲಸಕ್ಕೆ ಹೋಗಿದ್ದಾಗ ಬಾಗಿಲಿನ ಬೀಗವನ್ನು ಮುರಿದು ಗಾದ್ರೆಜ್ನಲ್ಲಿದ್ದ 97,000 ರೂಪಾಯಿ ನಗದು ಹಣವನ್ನು ಕಳವು ಮಾಡಿದ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2ನೇ ಪ್ರಕರಣದ ವಿವರ: ಶಂಕರನಾರಾಯಾಣ ಠಾಣೆ ವ್ಯಾಪ್ತಿಯ ಕುಳ್ಳುಂಜೆ ಗ್ರಾಮ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯನ್ನು ಒಡೆದು ಸುಮಾರು 35 ರಿಂದ 40 ಸಾವಿರ ಹಣವನ್ನು ಕಳವು ಮಾಡಿದ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ತಂಡ ರಚನೆ: ಆರೋಪಿಗಳ ಪತ್ತೆಯ ಕಾರ್ಯದಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷರಾದ ಸಂತೋಷ್ ಕಾಯ್ಕಣಿ ನೇತೃತ್ವದಲ್ಲಿ ಅಮಾಸೆಬೈಲು ಠಾಣಾ ಪಿಎಸ್ಐ ಭೀಮಾಶಂಕರ್ ಸಿನ್ನೂರ್, ತನಿಖಾ ಪಿಎಸ್ಐ ಸುಧಾರಾಣಿ ಟಿ., ಶಂಕರನಾರಾಯಣ ಠಾಣೆ ಪಿಎಸ್ಐ ಯೂನಸ್ ಗಡ್ಡೇಕರ್ ಅವರನ್ನೊಳಗೊಂಡ ಅಪರಾಧ ತಂಡದ ಎಎಸ್ಐ ಚಂದ್ರಶೇಖರ ಶೆಟ್ಟಿ, ಸಿಬ್ಬಂದಿಗಳಾದ ರಾಘವೇಂದ್ರ, ನವೀನ್ ಕುಮಾರ್, ಸುಧಾಕರ, ದಿನೇಶ, ಸಚಿನ್ ಕುಲಾಲ್, ಮಂಜುನಾಥ, ಜಯರಾಮ ನಾಯ್ಕ, ಚೇತನ್ ಕುಮಾರ್ ತಂಡ ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.






