ಉಡುಪಿ | ಕಲ್ಸಂಕ ಜಂಕ್ಷನ್ನಲ್ಲಿ ಟ್ರಾಫಿಕ್ ಸಿಗ್ನಲ್ಲೈಟ್ ಕಾರ್ಯಾರಂಭ

ಉಡುಪಿ, ನ.30: ನಗರದ ಪ್ರಮುಖ ವಾಹನ ದಟ್ಟನೆ ಸ್ಥಳವಾದ ಕಲ್ಸಂಕ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟ್ರಾಫಿಕ್ ಸಿಗ್ನಲ್ಲೈಟ್ ಅನ್ನು ಅಳವಡಿಸಲಾಗಿದ್ದು, ಇದು ಶನಿವಾರದಿಂದ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಮತ್ತುವರ್ಜಿಯಲ್ಲಿ ನಗರಸಭೆಯ ಅನುದಾನದೊಂದಿಗೆ ಉಡುಪಿ ಕಲ್ಸಂಕ ಜಂಕ್ಷನ್ನಲ್ಲಿ ಅಳವಡಿಸಿದ್ದ ಡಿಜಿಟಲ್ ಸಿಗ್ನಲ್ಲೈಟ್ ಅನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಶನಿವಾರ ಉದ್ಘಾಟಿಸಿದರು. ಆ ಬಳಿಕ ಕೆಲ ಕಾಲ ಸಿಗ್ನಲ್ಲೈಟ್ ನ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿದರು.
ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಟಿಡಿ, ನಗರಸಭೆಯ ಪೌರಾಯುಕ್ತ ಮಹಾಂತೇಶ್ ಹಾಗೂ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ರಸ್ತೆ ಅಪಘಾತಕ್ಕೆ ಕಡಿವಾಣ ಹಾಕಿ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಹಳೆಯ ಡಿವೈಡರ್, ಜಂಕ್ಷನ್ ನಲ್ಲಿಟ್ಟಿದ್ದ ಬಾಕ್ಸ್ ಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
‘ಕಲ್ಸಂಕ ಜಂಕ್ಷನ್ ನಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಕೆಲ ಸಮಯಗಳಿಂದ ಬೇಡಿಕೆ ಇತ್ತು. ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಲೈಟ್ ಅಳವಡಿಕೆಯ ಬಗ್ಗೆ ಕೇಳಿಕೊಂಡಿದ್ದರು. ಈ ಹಿಂದಿನ ಎಸ್ಪಿ ಡಾ.ಅರುಣ್ ನಗರಸಭೆಗೆ ಪತ್ರ ಬರೆದು ಕಲ್ಸಂಕ ಸಹಿತ 5 ಕಡೆಗಳಲ್ಲಿ ಟ್ರಾಫಿಕ್ ಲೈಟ್ ಅಳವಡಿಕೆಗೆ ಕೋರಿಕೆ ಸಲ್ಲಿಸಿದ್ದರು. ಬಳಿಕ ಸಾಕಷ್ಟು ಪರಿಶೀಲಿಸಿ, ಜಂಕ್ಷನ್ನಲ್ಲಿ ಇದೀಗ ಟ್ರಾಫಿಕ್ ಲೈಟ್ ಅಳವಡಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ನಗರದಲ್ಲಿ ವಾರಾಂತ್ಯದ ವೇಳೆ ಹೆಚ್ಚಿನ ಸಂಚಾರ ದಟ್ಟಣೆಯಿದ್ದು, ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ಸಿಗ್ನಲ್ ಲೈಟ್ ಅಳವಡಿಕೆಯಿಂದ ಆಗಿರುವ ಬದಲಾವಣೆಯ ಬಗ್ಗೆ ಗಮನ ಹರಿಸಲಾಗುವುದು. ಝೀಬ್ರಾ ಕ್ರಾಸ್, ಫ್ರೀ ಲೆಫ್ಟ್ ಸಹಿತ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆ ಮತ್ತು ನಗರಸಭೆ ಜಂಟಿಯಾಗಿ ಕೆಲಸ ಮಾಡುತ್ತೇವೆ. 2-3 ದಿನಗಳ ಕಾಲ ಈ ಬಗ್ಗೆ ವೀಕ್ಷಿಸಿ ಸಾಕಷ್ಟು ಬದಲಾವಣೆ ಮಾಡುತ್ತೇವೆ. ಸಾರ್ವಜನಿಕರಿಗೆ ಒಳ್ಳೆಯ ಸೇವೆ ನೀಡುತ್ತೇವೆ. ಸಿಂಡಿಕೇಟ್ ಸರ್ಕಲ್ ನಲ್ಲಿ 2 ದಿನಗಳಲ್ಲಿ ಕಾರ್ಯಾರಂಭವಾಗುತ್ತದೆ. 5 ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಮಾಡುವ ಬಗ್ಗೆ ಅನುಮತಿ ಸಿಕ್ಕಿದ್ದು, 2 ಜಂಕ್ಷನ್ ಗೆ ಅನುದಾನ ಮೀಸಲಿಟ್ಟಿದ್ದು, ಟೆಂಡರ್ ಆಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.







