ಉಡುಪಿ | ಅಗಲಿದ ಸಾಲುಮರ ತಿಮ್ಮಕ್ಕಗೆ ನುಡಿ ನಮನ

ಉಡುಪಿ, ನ.16: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಇತ್ತೀಚಿಗೆ ಅಗಲಿದ ವೃಕ್ಷಮಾತೆ ಪದ್ಮಶ್ರೀ ಸಾಲುಮರ ತಿಮ್ಮಕ್ಕ ಅವರಿಗೆ ನುಡಿ ನಮನ ಕಾರ್ಯಕ್ರಮ ಉಡುಪಿಯ ಇನ್ನಲ್ಲಿ ಯಲ್ಲಿ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉರಗತಜ್ಞ ಗುರುರಾಜ್ ಸನಿಲ್, ಸಾಲುಮರ ತಿಮ್ಮಕ್ಕರವರು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ ಪರಿಸರದ ಮೇಲಿನ ಅಪಾರ ಪ್ರೀತಿಯನ್ನು ಹೊಂದಿ ನೂರಾರು ಗಿಡಗಳನ್ನು ನೆಟ್ಟು ಘೋಷಣೆ ಮಾಡಿದ್ದರು. ಅದನ್ನು ನೋಡಿ ವಿಶ್ವದಾದ್ಯಂತ ಪರಿಸರದ ಬಗ್ಗೆ ಅಭಿಯಾನಗಳು ನಡೆಯಲು ಸಾಧ್ಯವಾಯಿತು ಎಂದರು.
ನಿರೂಪಕ ಅವಿನಾಶ್ ಕಾಮತ್ ಮಾತನಾಡಿ, ತಿಮ್ಮಕ್ಕ ಅಜ್ಜಿ ಮತ್ತು ಉಡುಪಿಗೆ ಅವಿನಾಭಾವ ಸಂಬಂಧವಿದೆ. ಇಂದು ಅಜ್ಜಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯಲು ಉಡುಪಿಯ ಜನತೆಯ ಸಹಕಾರವು ಇತ್ತು ಎಂದು ನೆನಪು ಮಾಡಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಸುಹಾಸಂನ ಶ್ರೀನಿವಾಸ್ ಉಪಾಧ್ಯ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಇನ್ನ ಮುಖ್ಯಸ್ಥ ನಾಗರಾಜ ಹೆಬ್ಬಾರ್, ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಪದಾಧಿಕಾರಿಗಳಾದ ದೀಪಾ ಚಂದ್ರಕಾಂತ್, ರಂಜನಿ ವಸಂತ್, ಸಿದ್ದ ಬಸಯ್ಯಸ್ವಾಮಿ ಚಿಕ್ಕಮಠ, ಶಶಿಕಾಂತ ಶೆಟ್ಟಿ, ಲಕ್ಷ್ಮಿಕಾಂತ್, ರಾಜೇಶ್, ರಾಮಾಂಜಿ ಮುಂತಾದವರು ಉಪಸ್ಥಿತರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಸ್ತಾವನೆಗೈದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.







