ಉಡುಪಿ: ಹಲವು ಸರಕಾರಿ ಕಚೇರಿಗಳಿಗೆ ಉಪಲೋಕಾಯುಕ್ತ ತಂಡದ ಭೇಟಿ

ಉಡುಪಿ, ಫೆ.27: ಎರಡು ದಿನಗಳ ಉಡುಪಿ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಬುಧವಾರ ಲೋಕಾಯುಕ್ತದಲ್ಲಿ ದಾಖಲಾದ ದೂರುಗಳ ವಿಚಾರಣೆ ನಡೆಸಿ, ಹೊಸ ದೂರು ದಾಖಲಿಸಿಕೊಂಡ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಇಂದು ವಿವಿಧ ಸರಕಾರಿ ಕಚೇರಿಗಳಿಗೆ ಹಾಗೂ ಮಲ್ಪೆ ಬಂದರು, ಕೆಎಸ್ಸಾರ್ಟಿಸಿ ನಿಲ್ದಾಣ, ನಿಟ್ಟೂರು ಎಸ್ಟಿಪಿ ಘಟಕಗಳಿಗೆ ಹಠಾತ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಕುರಿತಂತೆ ತೀವ್ರವಾದ ಅಸಮಧಾನ, ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ 7:30ರಿಂದ ತಮ್ಮ ಭೇಟಿಯನ್ನು ಪ್ರಾರಂಭಿಸಿದ ಉಪಲೋಕಾಯುಕ್ತ ತಂಡ ದಿನವಿಡಿ ಒಂದರ ನಂತರ ಒಂದರಂತೆ ಸ್ಥಳಗಳಿಗೆ ಭೇಟಿ ನೀಡಿ ತೀವ್ರ ಪರಿಶೀಲನೆ, ತಪಾಸಣೆ ನಡೆಸಿ ಮೇಲ್ನೋಟಕ್ಕೆ ಕಂಡು ಬರದ ನ್ಯೂನತೆಗಳನ್ನು ಪತ್ತೆ ಹಚ್ಚಿ ಸಂಬಂಧಿತರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿತು.
ನಿಟ್ಟೂರು, ಮಲ್ಪೆ ಬಂದರು ಭೇಟಿ ಬಳಿಕ ನಗರದ ಬನ್ನಂಜೆಯ ನೂತನ ಕೆಸ್ಸಾರ್ಟಿಸಿ ಬಸ್ನಿಲ್ದಾಣಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ತಂಡ, ಮಳಿಗೆಗಳಲ್ಲಿ ಮಾರಾಟ ಮಾಡುತ್ತಿರುವ ಸಿದ್ಧ ಆಹಾರ ಪದಾರ್ಥ ಹಾಗೂ ಪಾನೀಯ ಗಳ ತಯಾರಾದ ದಿನಾಂಕ ಮತ್ತು ಅವಧಿ ಮುಗಿದ ದಿನಾಂಕಗಳ ಪರಿಶೀಲನೆ ನಡೆಸಿತು.
ಬಳಿಕ ಅಲ್ಲಿದ್ದ ಕ್ಯಾಂಟೀನ್ನ ಅಡುಗೆ ಕೋಣೆಗೆ ಭೇಟಿ ನೀಡಿ, ಶುದ್ಧತೆ ಹಾಗೂ ಆಹಾರ ತಯಾರಿಕೆಯ ವ್ಯವಸ್ಥೆ ಪರಿಶೀಲಿಸಿ ಸ್ವಚ್ಛತೆಯ ಕುರಿತಂತೆ ಅಸಮಧಾನ ವ್ಯಕ್ತಪಡಿಸಿತು. ಜನರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ನೀಡುವಂತೆ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮಾಲಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಎದುರು ತಿಂಡಿ-ತಿನಿಸುಗಳ ದರಪಟ್ಟಿಯನ್ನು ಪ್ರದರ್ಶಿಸುವಂತೆ ತಿಳಿಸಿದ್ದಲ್ಲದೇ, ಜಿಲ್ಲಾ ಆಹಾರ ಅಂಕಿತ ಅಧಿಕಾರಿಗಳು ಆಗಾಗ ಬಂದು ವ್ಯವಸ್ಥೆ ಪರಿಶೀಲನೆ ಮಾಡಲು ನ್ಯಾ.ವೀರಪ್ಪ ಸೂಚನೆ ನೀಡಿದರು.
ಸ್ವಚ್ಛತಾ ಸಿಬ್ಬಂದಿಗಳ ದೂರು: ಬಸ್ನಿಲ್ದಾಣದ ಸ್ವಚ್ಛತಾ ಕಾರ್ಯ ನಿರ್ವಹಿಸುವ ನಾಲ್ವರು ಮಹಿಳೆಯರು ಉಪ ಲೋಕಾಯುಕ್ತರ ಬಳಿ ಬಂದು ತಮಗೆ ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯವನ್ನು ನೀಡುತ್ತಿಲ್ಲ ಎಂದು ದೂರಿದರು. ತಮಗೆ ಕೇವಲ 12 ಸಾವಿರ ರೂ.ಸಂಬಳ ನೀಡುತಿದ್ದು, ಇಎಸ್ಐ ಹಾಗೂ ಪಿಎಫ್ ಹಣವನ್ನು ಕಡಿತ ಮಾಡಿದರೂ ಇಎಸ್ಐ ಕಾರ್ಡ್ ಕೊಡದ್ದರಿಂದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ನಿಗಮದ ಅಧಿಕಾರಿಗಳು ಮೊದಲು ಅವರಿಗೆ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರೂ, ಬಳಿಕ ಹೊರ ಗುತ್ತಿಗೆ ಪಡೆದಿರುವ ಅವರ ಗುತ್ತಿಗೆದಾರರು ನೀಡುತ್ತಿರುವುದಾಗಿ ಹೇಳಿದ್ದಾರೆ ಎಂದರು. ಆದರೆ ವಿಚಾರಿಸಿದಾಗ ನಾಲ್ವರಿಗೂ ಇಎಸ್ಐ ಕಾರ್ಡ್ ಇಲ್ಲದಿರುವುದು ಖಚಿತ ವಾಯಿತು. ಕೂಡಲೇ ಅವರಿಗೆ ಕಾರ್ಡ್ ನೀಡುವಂತೆ ಸೂಚಿಸಿದ ಉಪಲೋಕಾಯುಕ್ತರು, ನಿಗದಿತ ಸಂಬಳವನ್ನು ಕಾಲಕಾಲಕ್ಕೆ ಗುತ್ತಿಗೆದಾರರು ನೀಡುತ್ತಿರುವ ಬಗ್ಗೆ ಪರಿಶೀಲಿಸಬೇಕು ಹಾಗೂ ವಿಮಾ ಆಧಾರಿತ ವೈದ್ಯಕೀಯ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ನಿಗಮದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲೂ ಹಲವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡರು.
ಉಡುಪಿ ತಾಲೂಕು ಕಚೇರಿಗೆ ಭೇಟಿ ನೀಡಿದ ವೇಳೆ ಉಪಲೋಕಾಯುಕ್ತ ತಂಡಕ್ಕೆ ವಿವಿಧ ವಿಭಾಗಗಳಲ್ಲಿ ಸಾಕಷ್ಟು ಅವ್ಯವಹಾರಗಳು ಪತ್ತೆಯಾಗದವು. ತಾಲೂಕು ಕಚೇರಿಯ ಆಡಳಿತ ವಿಭಾಗ, ಟಪ್ಪಾಲು ವಿಭಾಗ, ಭೂಮಿಕೇಂದ್ರ, ಅರ್ಜಿ ಸ್ವೀಕಾರ ನಿರ್ವಹಣಾ ಕೇಂದ್ರಗಳಿಗೆ ಭೇಟಿ ನೀಡಿ, ಕಡತಗಳನ್ನು ಹಾಗೂ ರಿಜಿಸ್ಟರ್ಗಳನ್ನು ಪರಿಶೀಲಿಸಿದಾಗ ಸಾಕಷ್ಟು ನ್ಯೂನ್ಯತೆಗಳು ಕಂಡು ಬಂದವು.
ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳು ಕಚೇರಿಯಲ್ಲೇ ಚಿಟ್ಫಂಡ್ ವ್ಯವಹಾರ ನಡೆಸುತ್ತಿರುವ ಹಾಗೂ ಇದಕ್ಕಾಗಿ ವ್ಯವಸ್ಥಿತವಾದ ರಿಜಿಸ್ಟರ್ ಒಂದನ್ನು ಇಟ್ಟಿರುವುದು ಉಪಲೋಕಾಯುಕ್ತರ ಕೈಗೆ ಸಿಕ್ಕಿತು. ಇದಕ್ಕಾಗಿ ತಹಶೀಲ್ದಾರ್ ಸೇರಿದಂತೆ ಹಲವರನ್ನು ಅವರು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕಚೇರಿಯ ಸಾಕಷ್ಟು ಸಿಬ್ಬಂದಿಗಳು ಡ್ರೆಸ್ಕೋಡ್ ಪಾಲಿಸದೇ ಜೀನ್ಸ್ ಪ್ಯಾಂಟ್ ಧರಿಸಿರುವುದಕ್ಕೆ ಅವರ ಮೇಲೆ ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಂಡರು.
ಉಪನೋಂದಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೋಂದಣಿಗೆ ಆಗಮಿಸಿದ ಜನರ ಸಮಸ್ಯೆ ಗಳನ್ನು ಆಲಿಸಿದ ಅವರು, ಕಚೇರಿಯ ಕಡತಗಳ ಪರಿಶೀಲನೆ ನಡೆಸಿದರು. ಅಲ್ಲಿನ ಗುತ್ತಿಗೆ ನೌಕರರು ತಮ್ಮ ಸ್ವಂತ ಬ್ಯಾಗ್ನಲ್ಲಿ ಕಚೇರಿಯ ಅನೇಕರ ದಾಖಲೆಗಳನ್ನು ಇರಿಸಿಕೊಂಡಿರುವುದನ್ನು ಪತ್ತೆ ಹಚ್ಚಿ ಸಬ್ರಿಜಿಸ್ಟ್ರಾರ್ ಸೇರಿದಂತೆ ಎಲ್ಲರನ್ನೂ ಖಾರವಾಗಿ ಪ್ರಶ್ನಿಸಿದರು. ಇವುಗಳ ಬಗ್ಗೆ ಸೂಕ್ತ ಸಮಜಾಯಿಶಿ ನೀಡದೇ ಕೆಲಸ ಕಾರ್ಯಗಳ ನಿರ್ವಹಣೆ ಯಲ್ಲಿ ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ನೌಕರ ಸುನಿಲ್ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರು ವಿಚಾರಣೆ -1 ಅರವಿಂದ್ ಎನ್.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಬಿ.ಪಿ ದಿನೇಶ್ ಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಸಹಾಯಕ ಕಮಿಷನರ್ ರಶ್ಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
7 ವರ್ಷಗಳಲ್ಲಿ ಆಗದ ಕೆಲಸ ಎರಡು ಗಂಟೆಯಲ್ಲಿ!
ವಾಯುಪಡೆಯ ಯೋಧರಿಗೆ ಕೊನೆಗೂ ಸಿಕ್ಕಿದ ದಾಖಲೆ
ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 83 ವರ್ಷ ಪ್ರಾಯದ ಯೋಧರೊಬ್ಬರಿಗೆ ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟಿನಲ್ಲಿ ಸರಕಾರದಿಂದ ಮಂಜೂರಾದ 1.70 ಎಕರೆ ಜಮೀನಿನ ಅಳತೆ ಅರ್ಜಿ ಕಳೆದ ಏಳು ವರ್ಷಗಳಿಂದ ಕೊಳೆಯುತಿದ್ದು, ಇಂದು ತಾಲೂಕು ಭೂಮಿ ದಾಖಲೆಗಳ ಕಚೇರಿಗೆ ಮತ್ತೊಮ್ಮೆ ಬಂದಾಗ, ಅಲ್ಲಿಗೆ ಬಂದ ಉಪಲೋಕಾಯುಕ್ತ ತಂಡದವರ ಗಮನಕ್ಕೆ ಬಂದು ಸಂಬಂಧಿತ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು ಕೇಸು ದಾಖಲಿಸುವ ಬೆದರಿಕೆಯ ನಂತರ ಎರಡನೇ ಗಂಟೆಯಲ್ಲಿ ಅದು ಅವರ ಕೈಗೆ ಸಿಗುವಂತಾಯಿತು.
ಉಡುಪಿ ತೆಂಕಪೇಟೆಯ ವಿಠಲ ನಿವಾಸದಲ್ಲಿ ವಾಸವಾಗಿರುವ ರಾಘವೇಂದ್ರ ರಾವ್ (83) ಭಾರತೀಯ ವಾಯುಪಡೆ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರಿಗೆ 2019ರಲ್ಲಿ ಸರಕಾರದಿಂದ ಬೊಮ್ಮರಬೆಟ್ಟಿನಲ್ಲಿ ಜಾಗ ಮಂಜೂರಾ ಗಿತ್ತು. ಆದರೆ ಜಾಗದ ಪ್ಲಾಟಿಂಗ್ ಮಾಡಿಕೊಡಲು ಅರ್ಜಿ ಸಲ್ಲಿಸಿ 7 ವರ್ಷ ಕಳೆದರೂ ಒಂದಲ್ಲ ಒಂದು ಕಾರಣದಿಂದ ಅವರನ್ನು ಅಲೆದಾಡಿಸಲಾಗುತ್ತಿತ್ತು. ಇಂದು ಸಹ ಕಚೇರಿಗೆ ಬಂದು ಮೂಲೆಯಲ್ಲಿ ಕುಳಿತಿದ್ದ ಹಿರಿಯರನ್ನು ನೋಡಿ ತಂಡದ ಅಧಿಕಾರಿಯೊಬ್ಬರು ತೆರಳಿ ಅವರ ಕತೆ ಕೇಳಿದ ಬಳಿಕ ಅದು ಉಪಲೋಕಾಯುಕ್ತರ ಗಮನಕ್ಕೆ ಬಂದಿತ್ತು.
ದೇಶಕ್ಕೆ ಸೇವೆ ಸಲ್ಲಿಸಿದ ಹಿರಿಯ ಸೈನಿಕರೊಬ್ಬರನ್ನು ನಡೆಸಿಕೊಂಡ ರೀತಿಯ ಬಗ್ಗೆ ಎಲ್ಲರನ್ನೂ ತರಾಟೆಗೆ ತೆಗೆದು ಕೊಂಡ ನ್ಯಾ.ವೀರಪ್ಪ, ಯೋಧನಿಗೆ ನೀವು ನೀಡುವ ಗೌರವ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಒಂದು ವಾರದೊಳಗೆ ಅವರಿಗೆ ದಾಖಲೆ ನೀಡುವಂತೆ ಆದೇಶಿಸಿದ್ದರೂ, ಮಧ್ಯಾಹ್ನವೇ ದಾಖಲೆ ರಾಘವೇಂದ್ರ ರಾವ್ ಅವರ ಕೈಸೇರಿದೆ.






