ರಾಷ್ಟ್ರಮಟ್ಟದಲ್ಲಿ ಬೇಡಿಕೆ ಪಡೆಯುತ್ತಿದೆ ಉಕಾಸದ ‘ಕಲ್ಪರಸ ಬೆಲ್ಲ’
ಕೇಂದ್ರ ಹಣಕಾಸು ಸಚಿವಾಲಯದಿಂದ ಗಣ್ಯರಿಗೆ ವಿತರಣೆಗೆ 500 ಬಾಟಲಿ ಖರೀದಿ

ಉಡುಪಿ, ನ.3: ಜಿಲ್ಲೆಯ ತೆಂಗು ಬೆಳೆಗಾರರ ಹಿತಾಸಕ್ತಿಯ ಉದ್ದೇಶ ದೊಂದಿಗೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಸ್ಥಾಪಿಸಲಾದ ಕಲ್ಪರಸ ಕಂಪೆನಿಯ ಉತ್ಪನ್ನವಾದ ಬೆಲ್ಲಕ್ಕೆ ಇಂದು ರಾಷ್ಟ್ರಮಟ್ಟದಲ್ಲಿ ಬೇಡಿಕೆ ಬಂದಿದೆ.
ಉಡುಪಿ ಕಲ್ಪರಸ ಕೋಕೊನಟ್ ಎಂಡ್ ಆಲ್ ಸ್ಪೈಸಸ್ ಪ್ರೊಡ್ಯುಸರ್ ಕಂಪೆನಿ (ಉಕಾಸ) ಹೆಸರಿನ ರೈತ ಉತ್ಪಾದಕ ಕಂಪೆನಿಯ ಮೂಲಕ ಅಬಕಾರಿ ಇಲಾಖೆಯ ಪರವಾನಿಗೆ ಪಡೆದು ಕಲ್ಪರಸದ ಉತ್ಪಾದನೆಯ ಜೊತೆಗೆ ಅದರ ಉಪ ಉತ್ಪನ್ನಗಳಾದ ಶರ್ಕರ, ಗುಡ, ಮದು ಮತ್ತು ನೆಗರ್ ಮೂಲಕ ಅನೇಕ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಆರೋಗ್ಯದ ದೃಷ್ಟಿಯಿಂದಲೂ ಇವುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ಇದೀಗ ಕಲ್ಪರಸದ 500 ಬಾಟಲಿ ಬೆಲ್ಲ (ಗುಡ)ವನ್ನು ಕೇಂದ್ರ ಸರಕಾರದ ಹಣಕಾಸು ಸಚಿವಾಲಯ ಖರೀದಿ ಮಾಡಿದೆ. ಗುರುವಾರ ಈ ಬೆಲ್ಲದ ಬಾಟಲುಗಳನ್ನು ಹೊಸದಿಲ್ಲಿಗೆ ಕಳುಹಿಸಲಾಗಿದೆ ಎಂದು ಕಂಪೆನಿಯ ಅಧ್ಯಕ್ಷ, ಪ್ರಗತಿಪರ ಕೃಷಿಕರೂ ಆಗಿರುವ ಸತ್ಯನಾರಾಯಣ ಉಡುಪ ಜಪ್ತಿ ಅವರು ತಿಳಿಸಿದ್ದಾರೆ.
ದೀಪಾವಳಿ ಸಂದಭರ್ದಲ್ಲಿ ಕೇಂದ್ರ ಸರಕಾರದ ಮಂತ್ರಿಗಳಿಗೆ, ವಿದೇಶಿ ರಾಯಭಾರಿಗಳಿಗೆ ಹಾಗೂ ರಾಷ್ಟ್ರಮಟ್ಟದ ಗಣ್ಯಾತಿಗಣ್ಯರಿಗೆ ನೀಡುವ ಉಡುಗೊರೆಯ ಪೆಟ್ಟಿಗೆ ಉಡುಪಿಯ ಈ ಆರೋಗ್ಯದಾಯಕ ಕಲ್ಪರಸ ಬೆಲ್ಲವೂ ಸೇರ್ಪಡೆ ಗೊಂಡಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯ ಗಣ್ಯರ ಮನೆಗಳಿಗೆ ನಮ್ಮ ಕಲ್ಪರಸದ ಬೆಲ್ಲದ ಕಂಪು ಪಸರಿಸಲಿದೆ ಎಂದು ಸತ್ಯನಾರಾಯಣ ಉಡುಪ ನುಡಿದರು.
ಅದೇ ರೀತಿ ಉಡುಪಿ ಜಿಲ್ಲಾಡಳಿತದಿಂದ ರಾಜ್ಯದ ಗಣ್ಯರಿಗೆ ಸಂಜೀವಿನಿ ಒಕ್ಕೂಟಗಳ ಮೂಲಕ ತಯಾರಿಸಿ ಕಳುಹಿಸಲಾ ಗುತ್ತಿರುವ 150 ಉಡುಗೊರೆ ಗಳ ಬುಟ್ಟಿಯಲ್ಲೂ ಕೂಡ ನಮ್ಮ ಉಕಾಸ ರೈತ ಉತ್ಪಾದಕ ಸಂಸ್ಥೆ ತಯಾರಿಸು ತ್ತಿರುವ ಕಲ್ಪರಸದ ಬೆಲ್ಲ ಸ್ಥಾನ ಪಡೆದಿದೆ ಎಂದೂ ಅವರು ಹೆಮ್ಮೆಯಿಂದ ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಇಂತಹ ದೊಡ್ಡ ಅವಕಾಶ ನಮಗೆ ಲಭಿಸಿದೆ. ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳಿಗೆ ಅಪಾರ ಬೇಡಿಕೆ ಉಂಟಾಗಿರುವ ಕಾರಣ ಅದರ ಉತ್ಪಾದನೆಗೆ ರೈತರುಗಳಿಗೆ ಹೆಚ್ಚು ಪ್ರೇರಣೆ ನೀಡಿ, ತೆಂಗು ಬೆಳೆಗಾರರಿಗೆ ಆರ್ಥಿಕ ವಾಗಿ ಬೆಂಬಲ ಸಿಗುವ ಮೂಲಕ ಹೆಚ್ಚಿನ ಆದಾಯ ಗಳಿಸಲು ಇದರಿಂದ ಸಾಧ್ಯವಾಗಲಿದೆ ಎಂದೂ ಉಡುಪ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಈ ಕಂಪನಿ ಉಡುಪಿ ಜಿಲ್ಲೆಯಾ ದ್ಯಂತ ಪ್ರಸ್ತುತ 1,028 ರೈತ ಶೇರುದಾರರನ್ನು ಹೊಂದಿರುವುದಲ್ಲದೆ, ಜಿಲ್ಲೆಯ 73 ಗ್ರಾಮಗಳಲ್ಲಿ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯನ್ನು ಹೊಂದಿ 6,500ಕ್ಕೂ ಹೆಚ್ಚು ತೆಂಗು ಬೆಳೆಗಾರರ ಒಕ್ಕೂಟ ಹಾಗೂ ಕಂಪೆನಿಯನ್ನು ರಚಿಸಿ ಕೊಂಡು ತೆಂಗಿನ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ದೊರಕಿಸುವ ನಿಟ್ಟನಲ್ಲಿ ಪ್ರಯತ್ನಶೀಲವಾಗಿದೆ ಎಂದು ಅವರು ವಿವರಿಸಿದರು.







