ಅದಾನಿ ಫೌಂಡೇಷನ್ನಿಂದ ಪಡುಬಿದ್ರೆ ವ್ಯಾಪ್ತಿಯಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಅನಾವರಣ

ಉಡುಪಿ, ನ.13: ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್ಆರ್ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್ ವತಿಯಿಂದ ತಾಲೂಕಿನ ಪಡುಬಿದ್ರಿ ಗ್ರಾಪಂ ವಾಪ್ತಿಯಲ್ಲಿ ಸಿಎಸ್ಆರ್ ಯೋಜನೆ ಯಡಿಲ್ಲಿ ಪೂರ್ಣಗೊಳಿಸಿದ ವಿವಿಧ ಕಾಮಗಾರಿಗಳನ್ನು ಇಂದು ಉದ್ಘಾಟಿಸಲಾಯಿತು.
ಈ ಯೋಜನೆಯಡಿಯಲ್ಲಿ ಸಾರ್ವಜನಿಕ ಶೌಚಾಲಯದ ನವೀಕರಣ ಹಾಗೂ ರುದ್ರ ಭೂಮಿಯ ನವೀಕರಣ ಕಾಮಗಾರಿ ಗಳು ಸೇರಿವೆ. ಇವುಗಳಿಗೆ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹಾಗೂ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಚಾಲನೆ ನೀಡಿದರು.
ಪಡುಬಿದ್ರಿ ಪೇಟೆಯಲ್ಲಿ ಇರುವ ಸಾರ್ವಜನಿಕ ಶೌಚಾಲಯವು ದು:ಸ್ಥಿತಿ ಯಲ್ಲಿ ಇದ್ದಿದ್ದರಿಂದ, ಸಾರ್ವಜನಿಕರ ಉಪ ಯೋಗಕ್ಕೆ ನಿರುಪಯುಕ್ತವಾಗಿತ್ತು. ಇದರಿಂದ ಪಡುಬಿದ್ರಿ ಗ್ರಾಪಂ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಅದಾನಿ ಫೌಂಡೇಷನ್ ತನ್ನ ವಾರ್ಷಿಕ ಸಿಎಸ್ಆರ್ ಯೋಜನೆಯಲ್ಲಿ ಇವುಗಳನ್ನು ನವೀಕರಿಸುವಂತೆ ಸೂಚಿಸಿತ್ತು.
ಅದರಂತೆ ಅದಾನಿ ಫೌಂಡೇಷನ್ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯವನ್ನು ನವೀಕರಿಸಿದೆ. ಅದೇ ರೀತಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಕಂಚಿನಡ್ಕ ಗ್ರಾಮದ ಬಳಿ ಇರುವ ರುದ್ರಭೂಮಿಯನ್ನೂ ಅದಾನಿ ಫೌಂಡೇಷನ್ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಗಳನ್ನು ನಿರ್ವಹಿಸಿದೆ. ಇಂದು ಈ ಎರಡು ಕಾಮಗಾರಿಗಳನ್ನು ಕಿಶೋರ್ ಆಳ್ವ ಹಾಗೂ ಶಶಿಕಲಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ, ಅದಾನಿ ಸಮೂಹವು ಅದಾನಿ ಫೌಂಡೇಷನ್ ಅಡಿಯಲ್ಲಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ 7 ಗ್ರಾಮ ಪಂಚಾಯತ್ಗಳಿಗೆ ಮೂಲಭೂತ ಸೌಕರ್ಯಅಭಿವೃದ್ಧಿಗೆ ಸಿಎಸ್ಆರ್ ಯೋಜನೆಯಲ್ಲಿ ಪ್ರತ್ಯೇಕ ಅನುದಾನ ಮೀಸಲಿಟ್ಟಿದ್ದು, ಆಯಾ ಗ್ರಾಪಂಗಳು ನೀಡುವ ಕ್ರಿಯಾಯೋಜನೆ ಮೇರೆಗೆ ಅಭಿವೃದ್ಧಿ ಹೊಂದಬೇಕಾದ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುತ್ತಿದೆ ಎಂದು ತಿಳಿಸಿದರು.
ಉಷ್ಣ ವಿದ್ಯುತ್ ಸ್ಥಾವರ ಅದಾನಿ ಸಮೂಹದ ತೆಕ್ಕೆಗೆ ಬಂದ ಮೇಲೆ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 1.55 ಕೋಟಿ ರೂ. ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿದೆ ಎಂದು ಆಳ್ವ ಹೇಳಿದರು.
ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಮಾತನಾಡಿ ಅದಾನಿ ಸಿಎಸ್ಆರ್ ಅನುದಾನಕ್ಕೆ ಅಭಿನಂದಿಸಿ ಅದಾನಿ ಸಂಸ್ಥೆಯು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಒಂದು ವರದಾನವಾಗಿದೆ ಎಂದು ಹರ್ಷಿಸಿಸಿದರು.
ಉಪಾಧ್ಯಕ್ಷ ಹೇಮಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಹಾಗೂ ಪಂಚಾಯತ್ ಸದಸ್ಯರಾದ ರಿಯಾ್, ಅದಾನಿ ಸಂಸ್ಥೆಯ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಷನ್ ನ ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.







