ಕಲೆಯಲ್ಲಿ ವಿಶ್ವಕರ್ಮ ಸಮಾಜ ಶ್ರೀಮಂತ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ, ಸೆ.22: ವಿಶ್ವಕರ್ಮ ಸಮಾಜ ಹಿಂದುಳಿದ ಸಮಾಜವಲ್ಲ. ಅತ್ಯಂತ ಮುಂದುವರಿದ ಸಮಾಜ. ಕಲೆಯ ಮೂಲಕ ಸಮಾಜವನ್ನು ಶ್ರೀಮಂತಗೊಳಿಸಿದವರು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.
ಕಾಪು ತಾಲೂಕಿನ ಪಡುಕುತ್ಯಾರುವಿನಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಇಂದು ಭೇಟಿ ನೀಡಿ ಮಾತನಾಡಿದ ಸಚಿವರು, ಇಂದು ಹೊಸ ಹೊಸ ವಿನ್ಯಾಸಗಳು ಮಾರುಕಟ್ಟೆಗೆ ಬಂದಿರಬಹುದು. ಆದರೆ ವಿಶ್ವಕರ್ಮರ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿಶ್ವಕರ್ಮನ ಕಲೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದರು.
ಹೆಣ್ಣು ಅಂಧವಾಗಿ ಕಾಣಲು ವಿಶ್ವಕರ್ಮರ ಕೈಚಳಕವೇ ಕಾರಣ. ಕಲಾತ್ಮಕ ಮೂಗುತಿ, ಕೈಬಳೆಗಳನ್ನು ತಯಾರಿಸುವ ಮೂಲಕ ಹೆಣ್ಣು ಚೆಂದವಾಗಿ ಕಾಣಲು ಇವರು ಪ್ರಥಮ ಪಾತ್ರವಹಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ 2013ರಲ್ಲಿ ಅಂದು ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ವಿಶ್ವಕರ್ಮ ಸಮಾಜಕ್ಕೆ ನಿಗಮ ಮಂಡಳಿಯನ್ನು ಸ್ಥಾಪಿಸಿದ್ದರು. ವಿಶ್ವಕರ್ಮ ಸಮಾಜವನ್ನು ಶೈಕ್ಷಣಿಕವಾಗಿ ಮುಂದೆ ತರಬೇಕಿದೆ. ಉಳಿದಂತೆ ಯಾವ ಕ್ಷೇತ್ರದಲ್ಲೂ ಸಮಾಜ ಹಿಂದೆ ಉಳಿದಿಲ್ಲ ಎಂದರು.
ಪಡುಕುತ್ಯಾರಿನಲ್ಲಿರುವ ಆನೆಗುಂದಿ ಕ್ಷೇತ್ರವನ್ನು ಪ್ರವಾಸೋದ್ಯಮ ಸ್ಥಳವಾಗಿಸಲು ಶ್ರಮಿಸುವುದಾಗಿ ಸಚಿವರು ಇದೇ ವೇಳೆ ಭರವಸೆ ನೀಡಿದರು.
ಈ ವೇಳೆ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಚಿವರನ್ನು ಆಶೀರ್ವದಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ, ಹಳೆಯಂಗಡಿ ಸೂರ್ಯ ಕುಮಾರ್ ಸೇರಿದಂತೆ ಮಠದ ನೂರಾರು ಭಕ್ತರು ಉಪಸ್ಥಿತರಿದ್ದರು.







