ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ಹೋದ ಯುವಕನಿಗೆ ಬಿಜೆಪಿ ಕಾರ್ಯಕರ್ತರಿಂದ ದೌರ್ಜನ್ಯ ಆರೋಪ; ಪ್ರಕರಣ ದಾಖಲು

ಪರಶುರಾಮ ಥೀಮ್ ಫಾರ್ಕ್
ಕಾರ್ಕಳ, ಅ.20: ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ಹೋದ ಯುವಕನಿಗೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ತೊಂದರೆ ನೀಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದ ಅಲ್ಬಾಝ್ (26) ಎಂಬವರು ಅ.19ರಂದು ಸಂಜೆ ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ತೆರಳಿದ್ದು, ಈ ವೇಳೆ ಅಲ್ಲಿಯೇ ಇದ್ದ ಬಿಜೆಪಿ ಯುವ ಮೋರ್ಚಾದ ಮುಖಂಡರಾದ ವಿಖ್ಯಾತ್, ಸುಹಾಸ್ ಮುಟ್ಲಪಾಡಿ, ರಾಕೇಶ್ ಕುಕ್ಕುಂದೂರು, ರಂಜಿತ್ ಕೌಡೂರು, ಮುಸ್ತಾ ಜಾರ್ಕಳ ಮೊದಲಾದವರು ಅಕ್ರಮ ಕೂಟ ಸೇರಿ ಅಲ್ಬಾಝ್ ಅವರನ್ನು ಎಳೆದುಕೊಂಡು ಹೋದರೆನ್ನಲಾಗಿದೆ.
ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮೂರ್ತಿಯ ಬಳಿ ಕರೆದುಕೊಂಡು ಹೋಗಿ ಅದು ಕಂಚಿನ ಮೂರ್ತಿ ಎಂಬುದಾಗಿ ಸುತ್ತಿಗೆ ನೀಡಿ ಪರೀಕ್ಷಿಸು ಎಂದು ಹೇಳಿದ್ದಲ್ಲದೇ, ಅಲ್ಬಜ್ ಅವರಲ್ಲಿ ‘ಅದು ಕಂಚಿನ ಮೂರ್ತಿ’ ಎಂದು ಹೇಳಿಸಿ ವಿಡಿಯೋ ಮಾಡಿ ತೊಂದರೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ಅಲ್ಬಾಝ್ ರವರ ಮೊಬೈಲನ್ನು ಎಳೆದುಕೊಂಡು ತೊಂದರೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.





