ವಾರ್ತಾಭಾರತಿಯ ಹಿರಿಯ ವರದಿಗಾರ ಎಂ.ಆರ್.ಮಾನ್ವಿಗೆ ʼಬಾರ್ಡೋಲಿ ಗೌರವ ಪ್ರಶಸ್ತಿʼ

ಎಂ.ಆರ್.ಮಾನ್ವಿ
ಅಂಕೋಲಾ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಯ ಪ್ರಯುಕ್ತ ಕೊಡಮಾಡುವ ʼಬಾರ್ಡೋಲಿ ಗೌರವ ಪ್ರಶಸ್ತಿʼಗೆ ʼವಾರ್ತಾಭಾರತಿʼಯ ಹಿರಿಯ ವರದಿಗಾರ ಎಂ.ಆರ್.ಮಾನ್ವಿ ಅವರು ಆಯ್ಕೆಯಾಗಿದ್ದಾರೆ.
ಪತ್ರಕರ್ತರ ಸಂಘದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಂಡಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ತಿಳಿಸಿದ್ದಾರೆ.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪ್ರತೀ ವರ್ಷ ಪತ್ರಿಕಾ ದಿನಾಚರಣೆ ಪ್ರಯುಕ್ತ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಸೆ. 8ರ ಸೋಮವಾರರಂದು ಗೋಖಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ಜರುಗುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಂ.ಆರ್.ಮಾನ್ವಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ಉಪಾದ್ಯಕ್ಷ ನಾಗರಾಜ ಮಂಜುಗುಣಿ, ಸದಸ್ಯರಾದ ಕೆ.ರಮೇಶ, ವಾಸುದೇವ ಗುನಗಾ, ಸುಭಾಷ್ ಕಾರೇಬೈಲ್, ಅಕ್ಷಯ ನಾಯ್ಕ, ನಾಗರಾಜ ಜಾಂಬಳೇಕರ, ದಿನಕರ ನಾಯ್ಕ, ಮೋಹನ ದುರ್ಗೇಕರ, ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಎಂ.ಆರ್.ಮಾನ್ವಿ ಮೂಲತಃ ರಾಯಾಚೂರು ಜಿಲ್ಲೆಯ ಮಾನ್ವಿ ತಾಲೂಕಿನವರಾಗಿದ್ದು, ಕಳೆದ 30 ವರ್ಷಗಳಿಂದ ಉ.ಕ ಜಿಲ್ಲೆಯ ಭಟ್ಕಳದಲ್ಲಿ ಪತ್ರಿಕಾರಂಗ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಭಟ್ಕಳ ಸದ್ಭಾವನಾ ಮಂಚ್ನ ಕಾರ್ಯದರ್ಶಿಯಾಗಿ, ಮತ್ತು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.







