ಭಟ್ಕಳದಲ್ಲಿ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ, ಎಸ್ಪಿಯನ್ನು ಭೇಟಿಯಾದ ಅನಿವಾಸಿ ಭಾರತೀಯರ ನಿಯೋಗ

ಭಟ್ಕಳ: ಇಲ್ಲಿನ ಅನಿವಾಸಿ ಭಾರತೀಯರ ಸಂಸ್ಥೆಯಾಗಿರುವ ರಾಬಿತಾ ಸೂಸೈಟಿ ಇದರ ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಮುನಿರಿ ಯವರ ನೇತೃತ್ವದಲ್ಲಿ ಭಟ್ಕಳದ ಸಾಮಾಜಿಕ ಕಾರ್ಯಕರ್ತರು, ಎನ್ಆರ್ಐಗಳು ಹಾಗೂ ವ್ಯಾಪಾರಿಗಳು ಉತ್ತರಕನ್ನಡ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರೊಂದಿಗೆ ಸಭೆ ನಡೆಸಿ, ಪಟ್ಟಣದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು.
ಇತ್ತೀಚೆಗೆ ರಾಬಿತಾ ಸೊಸೈಟಿ, ಭಟ್ಕಳದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು, ಹಿಂದೂ-ಮುಸ್ಲಿಂ ಸಮುದಾಯದ ನಾಯಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಅದೇ ಸಂದರ್ಭದಲ್ಲಿ ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಮುನಿರಿ ಮಾತನಾಡಿ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ 5,000 ಕ್ಕೂ ಹೆಚ್ಚು ಭಟ್ಕಳಿಗರು ಪ್ರತಿವರ್ಷ ಸುಮಾರು 1,000 ಕೋಟಿ ಹಣವನ್ನು ವಿದೇಶದಿಂದ ರವಾನೆ ಮಾಡುತ್ತಿದ್ದಾರೆ. ಈ ಹಣ ಭಟ್ಕಳದ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿದೆ ಎಂದು ಅವರು ತಿಳಿಸಿದ್ದರು.
ಇದೀಗ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮಸ್ಯೆಗಳ ಪರಿಹಾರ ಕುರಿತು ಚರ್ಚೆ ನಡೆಯಿತು. ಸಾಮಾಜಿಕ ಕಾರ್ಯಕರ್ತರು ಹಾಗೂ ವ್ಯಾಪಾರಿಗಳು ತಮ್ಮ ಸಲಹೆಗಳನ್ನು ನೀಡಿ, ಭಟ್ಕಳದ ಅಭಿವೃದ್ಧಿಗೆ ಕೈಜೋಡಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ಖ್ಯಾತ ಸ್ಥಳಿಯ ಉದ್ಯಮಿಗಳಾದ ಫವ್ವಾಜ್ ಸುಕ್ರಿ, ಜಾವಿದ್ ಅರ್ಮರ್, ಅಲ್ತಾಫ್ ಗೌಹರ್ ಸೇರಿದಂತೆ ಅರುಣ್ ನಾಯ್ಕ್, ರವಿ, ಮಂಜಪ್ಪ ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.





