ಸಂಸ್ಕಾರಯುತ ಬದುಕಿನಿಂದ ಮಾತ್ರ ಆದರ್ಶ ಸಮಾಜ ನಿರ್ಮಾಣ ಸಾಧ್ಯ: ಅನಂತ ಕುಮಾರ ಹೆಗಡೆ

ಯಲ್ಲಾಪುರ: ಬ್ರಾಹ್ಮಣತ್ವ ಎಂಬುದು ಕೇವಲ ಒಂದು ಜಾತಿಯಲ್ಲ, ಬದಲಿಗೆ ಅದೊಂದು ಯೋಗ್ಯತೆ ಮತ್ತು ಉನ್ನತ ಆದರ್ಶವಾಗಿದೆ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಕಾರ್ಮಿಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾ, ತಾಲ್ಲೂಕು ಹವ್ಯಕ ಸಂಘ, ಅಂಕೋಲಾ ಹವ್ಯಕ ಸಾಂಸ್ಕೃತಿಕ ಸಂಘ ಹಾಗೂ ಜೋಯಿಡಾ ಹವ್ಯಕ ಬಳಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 'ಸಂಸ್ಕಾರೋತ್ಸವ' ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರು ತಮ್ಮ ಸಾಂಪ್ರದಾಯಿಕ ಆಚಾರ-ವಿಚಾರಗಳಿಂದ ದೂರ ಸರಿಯುತ್ತಿರುವುದ ರಿಂದ ಬ್ರಾಹ್ಮಣತ್ವದ ಮೌಲ್ಯಗಳು ನಶಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ನಾವೆಲ್ಲರೂ ನಮ್ಮ ಮನೆಗಳಿಂದಲೇ ಆದರ್ಶದ ಮೇಲ್ಪಂಕ್ತಿಯನ್ನು ಹಾಕಿಕೊಡಬೇಕಾದ ಅಗತ್ಯವಿದೆ ಎಂದರು. ದೇವಸ್ಥಾನಗಳಿಗೆ ತೆರಳಿ ಭೌತಿಕ ಸುಖಗಳಿಗಾಗಿ ಬೇಡಿಕೆ ಇಡುವುದು ಸರಿಯಲ್ಲ, ಪ್ರತಿಯೊಬ್ಬರೂ ತಮ್ಮ ಕರ್ಮದ ಫಲವನ್ನು ಅನುಭವಿಸ ಲೇಬೇಕು ಎಂದು ಮಾರ್ಮಿಕವಾಗಿ ನುಡಿದ ಹೆಗಡೆಯವರು, ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿರುವುದೇ ಅವರು ವಿವಾಹವನ್ನು ಮುಂದೂಡುತ್ತಿರುವುದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ ಅವರು ಮಾತನಾಡಿ, ಮೊದಲು ನಮ್ಮ ತಪ್ಪುಗಳನ್ನು ನಾವೇ ತಿದ್ದುಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಹಾಗೂ ಸಮಾಜದ ಋಣವನ್ನು ತೀರಿಸುವ ಭಾವನೆಯೊಂದಿಗೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಆತಂಕ ಹಂಚಿಕೊಂಡ ಹಿರಿಯರಾದ ಪ್ರಮೋದ ಹೆಗಡೆ ಅವರು, ಇಂದಿನ ಯುವಕರು ಉದ್ಯೋಗ ಅರಸಿ ಪಟ್ಟಣಗಳ ಕಡೆ ಮುಖ ಮಾಡುತ್ತಿರುವುದರಿಂದ ಹಳ್ಳಿಗಳಲ್ಲಿ ಕೆಲಸ ಮಾಡುವವರೇ ಇಲ್ಲದಂತಾಗಿದೆ, ಈ ಬೆಳವಣಿಗೆಯನ್ನು ಗಮನಿಸಿ ನಾಳೆಯ ದಿನಗಳ ಬಗ್ಗೆ ಯೋಚಿಸಿದರೆ ಭಯವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ ಹಾಗೂ ನಿರ್ದೇಶಕ ಪ್ರಶಾಂತ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹೇಶ ಭಟ್ಟ ಮತ್ತು ಶ್ರೀರಾಮ ಭಟ್ಟ ಅವರು ವೇದಘೋಷ ಪಠಿಸಿದರೆ, ಪ್ರಸಾದಿನಿ ಭಟ್ಟ ಪ್ರಾರ್ಥಿಸಿದರು. ಮಹಾಸಭಾದ ನಿರ್ದೇಶಕ ಗೋಪಾಲಕೃಷ್ಣ ಹಂಡ್ರಮನೆ ಸಭಿಕರನ್ನು ಸ್ವಾಗತಿಸಿದರು. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ವೀಣಾ ಹೆಗಡೆ ಹಾಗೂ ರವೀಂದ್ರ ಗಾಂಯ್ಕರ ನೆರವೇರಿಸಿ ಕೊಟ್ಟರೆ, ಸಂಚಾಲಕ ಸಣ್ಣಪ್ಪ ಭಾಗ್ವತ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ ಎಂ.ಎನ್. ಹೆಗಡೆ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಗೋಷ್ಠಿ ಯೊಂದು ಯಶಸ್ವಿಯಾಗಿ ಜರುಗಿತು. ಈ ಗೋಷ್ಠಿಯಲ್ಲಿ ನಾಗರಾಜ ಹೆಗಡೆ, ರಮೇಶ ಹೆಗಡೆ, ವೀಣಾ ಹೆಗಡೆ, ಭಾಸ್ಕರ ಗಾಂಷ್ಕರ, ಶ್ರೀಧರ ಹೆಗಡೆ ಹಾಗೂ ವಿನೋದ ಭಟ್ಟ ಅವರು ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು. ತದನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಾಗ್ಮಿ ಜಿ.ಎಸ್. ನಟೇಶ ಅವರು ಸಂಸ್ಕಾರಗಳ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯನ್ನು ವಿವರವಾಗಿ ಸಾರಿದರೆ, ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಶೋಡಷ ಸಂಸ್ಕಾರಗಳ ಮಹತ್ವದ ಕುರಿತು ನೆರೆದಿದ್ದ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.






