ಭಟ್ಕಳ ಮುರಿನಕಟ್ಟೆ ವಿವಾದ: ವದಂತಿಗಳಿಗೆ ಕಿವಿಗೊಡದಂತೆ ಜಿಲ್ಲಾಡಳಿತ, ತಂಝೀಮ್ ಹಾಗೂ ಸಚಿವ ಮಂಕಾಳ ವೈದ್ಯ ಮನವಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿಯ ನಡುವೆ ಮುನ್ನೆಲೆಗೆ ಬಂದಿರುವ ‘ಮೂರಿನಕಟ್ಟೆ’ ವಿವಾದ ಭಟ್ಕಳದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಮೂಲ ಮುರಿನಕಟ್ಟೆಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಅದು ಯಥಾಸ್ಥಿತಿಯಲ್ಲಿಯೇ ಸುರಕ್ಷಿತವಾಗಿದೆ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ “ಮೂರಿನಕಟ್ಟೆ ಧ್ವಂಸ” ಕುರಿತು ಹರಡುತ್ತಿರುವ ವಿಡಿಯೊಗಳು ಹಾಗೂ ಸಂದೇಶ ಗಳು ತಪ್ಪು ಮಾಹಿತಿಯಿಂದ ಕೂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನ ಸಂಚಾರಕ್ಕೆ ಅನುಕೂಲ ವಾಗುವ ಉದ್ದೇಶದಿಂದ ಹೆದ್ದಾರಿ ಕಾಮಗಾರಿಯ ಭಾಗವಾಗಿ ಪರ್ಯಾಯ ಕಟ್ಟೆ ನಿರ್ಮಾಣ ಕಾರ್ಯ ಕೈಗೊಳ್ಳಲಾ ಗಿತ್ತು. ಆದರೆ, ಈ ಹೊಸ ಕಟ್ಟೆ ನಿರ್ಮಾಣದ ದೃಶ್ಯಗಳನ್ನು ತಪ್ಪು ಅರ್ಥದಲ್ಲಿ ಹರಡಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ, “ಸಾಂಪ್ರದಾಯಿಕವಾಗಿ ಹೊರೆ ಇಡಲಾಗುತ್ತಿರುವ ಮೂಲ ಮುರಿನಕಟ್ಟೆ ಸಂಪೂರ್ಣ ಸುರಕ್ಷಿತವಾಗಿದ್ದು, ಅದನ್ನು ಯಾರೂ ಕೆಡವಿಲ್ಲ” ಎಂದು ಸ್ಪಷ್ಟಪಡಿಸಲಾಗಿದೆ. ಕಿಡಿಗೇಡಿಗಳು ಹೊಸದಾಗಿ ನಿರ್ಮಿಸಲಾಗುತ್ತಿದ್ದ ಪರ್ಯಾಯ ಕಟ್ಟೆಗೆ ಹಾನಿ ಮಾಡಿರುವುದಾಗಿ ಕೂಡ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳಾಂತರ ವಿಚಾರಕ್ಕೆ ತಂಝೀಮ್ ಆಕ್ಷೇಪ: ಈ ಕುರಿತು ಪ್ರತಿಕ್ರಿಯಿಸಿದ ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, “ನಮಗೆ ಹಿಂದೂ ಧರ್ಮದ ಮೇಲೋ, ಪೂಜಾಸ್ಥಳಗಳ ಮೇಲೋ ಯಾವುದೇ ವಿರೋಧವಿಲ್ಲ. ಭಟ್ಕಳದಲ್ಲಿ ಹಿಂದೂ-ಮುಸ್ಲಿಮರು ಸಹೋದರತ್ವದಿಂದ ಬದುಕುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಹೆದ್ದಾರಿ ವಿಸ್ತರಣೆ ವೇಳೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಲವು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸ ಲಾಗಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಜನವಸತಿ ಪ್ರದೇಶದ ಸಮೀಪ ಕಟ್ಟೆಯನ್ನು ಮರುನಿರ್ಮಿಸುವುದರಿಂದ ಮುಂದಿನ ದಿನಗಳಲ್ಲಿ ಅನಗತ್ಯ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
“ಒಂದು ವೇಳೆ ಕಟ್ಟೆ ನಿರ್ಮಿಸಬೇಕಾದರೆ ಅದನ್ನು ಮೂಲ ಸ್ಥಳದಲ್ಲಿಯೇ ಅಥವಾ ಹಿಂದಿನ ಜಾಗದಲ್ಲಿಯೇ ನಿರ್ಮಿಸಿದರೆ ನಮಗೆ ಯಾವುದೇ ಅಭ್ಯಂತರವಿಲ್ಲ” ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.
6 ಮಂದಿ ಬಂಧನ; ನಾಲ್ಕು ಪ್ರಕರಣ ದಾಖಲು: ವೈರಲ್ ವಿಡಿಯೊಗಳನ್ನು ನೋಡಿ ಕೆಲವರು ಸ್ಥಳಕ್ಕೆ ಜಮಾಯಿಸಿ ಹೊಸದಾಗಿ ನಿರ್ಮಾಣವಾಗುತ್ತಿದ್ದ ಕಟ್ಟೆಯನ್ನು ತೆರವುಗೊಳಿಸಲು ಯತ್ನಿಸಿದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಕೆಲವು ಕಡೆ ತಳ್ಳಾಟ-ನೂಕಾಟವೂ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆದ್ದಾರಿ ತಡೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಪ್ರಚೋದನಕಾರಿ ವಿಡಿಯೊ ಹಂಚಿಕೆ ಸೇರಿದಂತೆ ವಿವಿಧ ಆರೋಪ ಗಳಡಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈವರೆಗೆ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.
“ಸಾಮಾಜಿಕ ಸೌಹಾರ್ದತೆಯೇ ಭಟ್ಕಳದ ಶಕ್ತಿ” : ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯಿಸಿ, “ಸೂಕ್ಷ್ಮ ಪರಿಸ್ಥಿತಿಯಲ್ಲಿ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾಮಾಜಿಕ ಸೌಹಾರ್ದತೆಯೇ ಭಟ್ಕಳದ ಶಕ್ತಿ” ಎಂದು ಹೇಳಿದ್ದಾರೆ.
ನಿಷೇಧಾಜ್ಞೆ ಜಾರಿ: ಪರಿಸ್ಥಿತಿ ಹದಗೆಡದಂತೆ ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿ.ಎನ್.ಎಸ್.ಎಸ್. ಕಾಯ್ದೆಯ ಕಲಂ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತಾ ದೃಷ್ಟಿಯಿಂದ 9 ಕೆಎಸ್ಆರ್ಪಿ, 3 ಡಿಎಆರ್ ತುಕಡಿಗಳು ಸೇರಿದಂತೆ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರು ಯಾವುದೇ ವದಂತಿಗಳು, ಪ್ರಚೋದನಕಾರಿ ಸಂದೇಶಗಳು ಅಥವಾ ಸಾಮಾಜಿಕ ಜಾಲತಾಣದ ಅಪಪ್ರಚಾರಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿದೆ.






