ಲಿಖಿತ ದಾಖಲೆಗಳೇ ಕಾನೂನು ಹೋರಾಟದ ಅಸ್ತ್ರ: ಅಕ್ಮಲ್ ರಿಝ್ವಿ

ಭಟ್ಕಳ: ಸರ್ಕಾರಿ ಕಚೇರಿಗಳಲ್ಲಿ ಮೌಖಿಕ ಮನವಿಗಳಿಗೆ ಬದಲಾಗಿ ಲಿಖಿತ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯುವುದು ಕಾನೂನು ಹೋರಾಟದ ಮೊದಲ ಹೆಜ್ಜೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲ ಹಾಗೂ ಎಪಿಸಿಆರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಮಲ್ ರಿಝ್ವಿ ಹೇಳಿದರು.
ಪಟ್ಟಣದ ರಾಬಿತಾ ಸಭಾಂಗಣದಲ್ಲಿ ಶನಿವಾರ ಎಪಿಸಿಆರ್ ಆಯೋಜಿಸಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಇಲಾಖೆಗೆ ಸಲ್ಲಿಸುವ ಎಲ್ಲ ಅರ್ಜಿಗಳಿಗೆ ಅಧಿಕೃತ ಸ್ವೀಕೃತಿ ಪಡೆಯಬೇಕು ಹಾಗೂ ಅಗತ್ಯವಿದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕುಡಿಯುವ ನೀರು, ರಸ್ತೆ ಮತ್ತು ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳು ಪ್ರತಿಯೊಬ್ಬ ನಾಗರಿಕನ ಹಕ್ಕುಗಳಾಗಿದ್ದು, ಸಮಸ್ಯೆಗಳಿದ್ದರೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಹಿನ್ನೆಲೆಯಲ್ಲಿ ಆಗಸ್ಟ್ 8ರೊಳಗೆ ಪ್ರತಿಯೊಬ್ಬರೂ ಮತದಾ ರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಕರೆ ನೀಡಿದರು. ಯುವಜನರು ಎಸ್ಎಸ್ಎಲ್ಸಿ ಅಂಕಪಟ್ಟಿ, ಜನನ ಪ್ರಮಾಣಪತ್ರ, ಪಾಸ್ಪೋರ್ಟ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಬಿತಾ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಫಾರೂಖ್ ಮುಸ್ಬಾ ಮುಖ್ಯಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತಿ ದ್ದರು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಎಸ್.ಎಂ.ಸೈಯ್ಯದ್ ಝುಬೇರ್ ಅಧ್ಯಕ್ಷತೆ ವಹಿಸಿದ್ದರು.
ಎಪಿಸಿಆರ್ ಉ.ಕ ಜಿಲ್ಲಾಧ್ಯಕ್ಷ ಖಮರುದ್ದೀನ್ ಮಷಾಯಿಕ್ ಪ್ರಸ್ತಾವಿಕವಾಗಿ ಮಾತನಡಿದರು. ಪ್ರಧಾನ ಕಾರ್ಯ ದರ್ಶಿ ಇಸ್ಮಾಯಿಲ್ ರಾಜಾ ಧನ್ಯವಾದ ಅರ್ಪಿಸಿದರು. ಪತ್ರಕರ್ತ ಇಸ್ಮಾಯಿಲ್ ಝವರೇಝ್ ಕಾರ್ಯಕ್ರಮ ನಿರೂಪಿಸಿದರು.






