ಕುಟುಂಬ ಮೌಲ್ಯ, ಯುವಜನರ ಮಾರ್ಗದರ್ಶನಕ್ಕೆ ಆದ್ಯತೆ ನೀಡಿ: ಖ್ವಾಜಾ ಅಕ್ರಮಿ

ಭಟ್ಕಳ: ಮಾರ್ಕಝಿ ಖಲೀಫಾ ಜಮಾಅತುಲ್ ಮುಸ್ಲಿಮೀನ್ ವತಿಯಿಂದ ಶುಕ್ರವಾರ ರಾತ್ರಿ ಖಲೀಫಾ ಜಾಮಿಯ ಮಸೀದಿಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.
ಸಭೆಯಲ್ಲಿ ಜಮಾಅತ್ನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಲಾಯಿತು. ಧಾರ್ಮಿಕ ವಿದ್ವಾಂಸರು ಕುಟುಂಬ ಮೌಲ್ಯಗಳ ಸಂರಕ್ಷಣೆ, ಸಾಮಾಜಿಕ ಸಮಸ್ಯೆಗಳ ಪರಿಹಾರ ಹಾಗೂ ಯುವಜನರ ಸರಿಯಾದ ಮಾರ್ಗದರ್ಶನದ ಕುರಿತು ಮಾತನಾಡಿದರು.
ಜಮಾಅತ್ನ ಪ್ರಧಾನ ಖಾಝಿ ಮೌಲಾನಾ ಖ್ವಾಜಾ ಮೊಯಿನುದ್ದೀನ್ ಅಕ್ರಮಿ ಮದನಿ ಮಾತನಾಡಿ, ‘ವಿವಾಹ ಕೇವಲ ಸಾಮಾಜಿಕ ಆಚರಣೆಯಲ್ಲ; ಅದು ಪವಿತ್ರ ಜವಾಬ್ದಾರಿ’ ಎಂದರು. ವಿವಾಹಕ್ಕೂ ಮುನ್ನ ಮಕ್ಕಳಿಗೆ ಧಾರ್ಮಿಕ, ನೈತಿಕ ಹಾಗೂ ಕುಟುಂಬ ಜೀವನದ ಕುರಿತು ಸೂಕ್ತ ಶಿಕ್ಷಣ ನೀಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ಹೆಣ್ಣುಮಕ್ಕಳಿಗೆ ತಾಳ್ಮೆ, ವಿವೇಕ, ಪತಿ ಹಾಗೂ ಅತ್ತೆ-ಮಾವಂದಿರನ್ನು ಗೌರವಿಸುವ ಗುಣಗಳನ್ನು ಬೆಳೆಸಬೇಕು. ಗಂಡುಮಕ್ಕಳು ಪತ್ನಿಯ ಹಕ್ಕುಗಳನ್ನು ಗೌರವಿಸಿ, ದಯೆ ಮತ್ತು ನ್ಯಾಯದಿಂದ ನಡೆದುಕೊಳ್ಳುವಂತೆ ಬೆಳೆಸಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ವಿಚ್ಛೇದನಕ್ಕೆ ಕಾರಣವಾಗದಂತೆ ಮಾತುಕತೆ, ತಾಳ್ಮೆ ಮತ್ತು ರಾಜಿ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಯುವಜನರು ಮಾದಕ ವಸ್ತುಗಳು, ಅನೈತಿಕ ಚಟುವಟಿಕೆಗಳು, ಕಾನೂನುಬಾಹಿರ ಕೃತ್ಯಗಳು ಹಾಗೂ ಅಕ್ರಮ ಆದಾಯದಿಂದ ದೂರವಿರಬೇಕು. ಇಂತಹ ಚಟುವಟಿಕೆಗಳು ಭವಿಷ್ಯವನ್ನು ಹಾಳುಮಾಡುವುದರ ಜತೆಗೆ ಕಾನೂನು ಸಮಸ್ಯೆ ಹಾಗೂ ಕುಟುಂಬಗಳ ಒಡಕಿಗೂ ಕಾರಣವಾಗಬಹುದು ಎಂದು ಎಚ್ಚರಿಸಿದರು. ದೇಶದ ಕಾನೂನುಗಳನ್ನು ಗೌರವಿಸಿ, ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಕರೆ ನೀಡಿದರು.
ಸಭೆಯಲ್ಲಿ ಉಪ ಖಾಝಿ ಮೌಲವಿ ಅಯ್ಮನ್ ಅಲಿ ಕಮಾರಿ ನದ್ವಿ, ಉಪಾಧ್ಯಕ್ಷ ಡಾ. ಜುಬೈರ್ ಕೋಲಾ ಹಾಗೂ ಅಧ್ಯಕ್ಷ ಎಸ್.ಎಂ. ಸಯ್ಯದ್ ಮೊಹಿಯುದ್ದೀನ್ ಮಾರ್ಕೆಟ್ ಮಾತನಾಡಿದರು.
ಉಪಾಧ್ಯಕ್ಷ ಮೊಹ್ತಿಶಮ್ ಮೊಹಮ್ಮದ್ ಹಾಶಿಂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಜುಬಾಪು ವಾರ್ಷಿಕ ವರದಿ ಹಾಗೂ ಹಣಕಾಸು ಕಾರ್ಯದರ್ಶಿ ಮೌಲವಿ ಇಸ್ಮಾಯಿಲ್ ಅಂಜುಮ್ ಗಂಗಾವಳಿ ನದ್ವಿ ಲೆಕ್ಕಪತ್ರ ಮಂಡಿಸಿದರು.
ಮೌಲವಿ ತಫ್ಹೀಮ್ ಸಿದ್ದೀಕಾ ನದ್ವಿ ಮತ್ತು ಮೌಲವಿ ಹಸನ್ ಡಿಎಫ್ ನದ್ವಿ ಕಾರ್ಯಕ್ರಮ ನಿರ್ವಹಿಸಿದರು.






