ಭಟ್ಕಳದ ಗೋವಿಂದ ದೇವಾಡಿಗರಿಗೆ ‘ಭಾರತೀಯ ಯೋಗ ರತ್ನ–2026’ ಪ್ರಶಸ್ತಿ

ಭಟ್ಕಳ: ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ತಾಲ್ಲೂಕಿನ ಯೋಗ ಶಿಕ್ಷಕ ಹಾಗೂ ಯೋಗ ಇನ್ಸ್ಟಿಟ್ಯೂಟ್ನ ತಾಲ್ಲೂಕು ಉಸ್ತುವಾರಿ ಗೋವಿಂದ ಎನ್. ದೇವಾಡಿಗ (ಗೋವಿಂದ ಗುರೂಜಿ) ಅವರಿಗೆ ಪ್ರತಿಷ್ಠಿತ ‘ಭಾರತೀಯ ಯೋಗ ರತ್ನ–2026’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತ ಸರ್ಕಾರದ ನೀತಿ ಆಯೋಗದಡಿ ನೋಂದಾಯಿತ ಸಂಸ್ಥೆ ಯಾದ ದಿ ಇಂಡಿಯನ್ ಫೋರಂ ಫಾರ್ ಸೋಶಿಯಲ್ ಲೀಡರ್ಸ್ ಅಂಡ್ ಅಚೀವರ್ಸ್ ಆಯೋಜಿಸಿದ್ದ ‘ಭಾರತೀಯ ಯೋಗ ಎಕ್ಸಲೆನ್ಸ್ ಅವಾರ್ಡ್ಸ್–2026’ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಗ, ಮೈಂಡ್ಫುಲ್ನೆಸ್ ಹಾಗೂ ಸಮಗ್ರ ಆರೋಗ್ಯದ ಕುರಿತು ಸಮಾಜದಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿ ರುವ ಅವರ ಸೇವೆ, ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಗೋವಿಂದ ದೇವಾಡಿಗ ಅವರು ಹಲವು ವರ್ಷಗಳಿಂದ ಯೋಗ ತರಬೇತಿ ಶಿಬಿರಗಳು, ಆರೋಗ್ಯ ಜಾಗೃತಿ ಕಾರ್ಯ ಕ್ರಮಗಳು ಹಾಗೂ ಯೋಗಾಭ್ಯಾಸದ ಮೂಲಕ ಸಾವಿರಾರು ಮಂದಿಯಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಈ ರಾಷ್ಟ್ರೀಯ ಮಟ್ಟದ ಗೌರವವು ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದು, ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಲು ಯುವಜನರಿಗೆ ಪ್ರೇರಣೆಯಾಗಲಿದೆ ಎಂದು ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಗೋವಿಂದ ದೇವಾಡಿಗ ಅವರಿಗೆ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಯೋಗಾಭ್ಯಾಸಿಗಳು, ಶಿಷ್ಯರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.






