ಭಟ್ಕಳ: ಮಿನಿ ವಿಧಾನಸೌಧದಲ್ಲಿ ಆಧಾರ್ ಸೇವೆ ಪುನಾರಂಭ

ಭಟ್ಕಳ: ಕಳೆದ ಎರಡು–ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ಭಟ್ಕಳ ತಾಲ್ಲೂಕು ಆಡಳಿತ ಭವನದ (ಮಿನಿ ವಿಧಾನಸೌಧ) ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಮಂಗಳವಾರ ಪುನಾರಂಭಗೊಂಡಿದ್ದು, ಆಧಾರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಸಾರ್ವಜನಿಕರಿಗೆ ಬಹು ನಿರಾಳತೆ ದೊರೆತಿದೆ.
ಮಿನಿ ವಿಧಾನಸೌಧದಲ್ಲಿದ್ದ ಆಧಾರ್ ಕಿಟ್ನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಖಾಸಗಿ ಸಂಸ್ಥೆಗೆ ನೀಡಿದ್ದ ಒಪ್ಪಂದ ಅವಧಿ ಮುಗಿದ ನಂತರ ಕೇಂದ್ರ ನಿಷ್ಕ್ರಿಯವಾಗಿತ್ತು. ಇದರಿಂದ ಖಾಸಗಿ ಕೇಂದ್ರಗಳು ಹಾಗೂ ಟೈಪಿಂಗ್ ಕೇಂದ್ರಗಳಲ್ಲಿ ಆಧಾರ್ ಸೇವೆ ಸ್ಥಗಿತಗೊಂಡು, ಸಾರ್ವಜನಿಕರು ತಾಲ್ಲೂಕು ಕಚೇರಿ ಮತ್ತು ಅಂಚೆ ಕಚೇರಿಗಳಲ್ಲಿರುವ ಸರ್ಕಾರಿ ಕೇಂದ್ರಗಳ ಮೇಲೆಯೇ ಅವಲಂಬಿತರಾಗಿದ್ದರು. ತಾಂತ್ರಿಕ ಕಾರಣಗಳಿಂದ ಅಲ್ಲಿ ಕೂಡ ಸೇವೆ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿತ್ತು.
ಈ ಪರಿಸ್ಥಿತಿಯಿಂದಾಗಿ ಆಧಾರ್ ತಿದ್ದುಪಡಿ ಹಾಗೂ ನವೀಕರಣಕ್ಕಾಗಿ ಜನರು ಅಂಚೆ ಕಚೇರಿಗಳಿಗೆ ಮರುಮರು ಭೇಟಿ ನೀಡಬೇಕಾಗಿತ್ತು. ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದರು. ಪ್ರವೇಶ ಪ್ರಕ್ರಿಯೆ ಸೇರಿದಂತೆ ಅನೇಕ ಅಗತ್ಯ ಕಾರ್ಯಗಳಲ್ಲಿ ವಿಳಂಬ ಉಂಟಾಗಿತ್ತು.
ಕೇಂದ್ರ ಅಂಚೆ ಕಚೇರಿಯಲ್ಲಿ ತಿಂಗಳಲ್ಲಿ ಒಮ್ಮೆ ಸೀಮಿತ ಸಂಖ್ಯೆಯಲ್ಲಿ ಟೋಕನ್ ನೀಡಿ ಆಧಾರ್ ಸಂಬಂಧಿತ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿತ್ತು. ಆದರೆ ಟೋಕನ್ ಪಡೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಜನರು ಮುಂಜಾನೆಯೇ ಚಿಕ್ಕ ಮಕ್ಕಳೊಂದಿಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆಧಾರ್ ಸಮಸ್ಯೆ ಗಂಭೀರವಾಗುತ್ತಿದ್ದಂತೆ ವಿಷಯವನ್ನು ಜಿಲ್ಲಾ ಆಡಳಿತದ ಗಮನಕ್ಕೆ ತರಲಾಗಿದ್ದು, ಸಾಮಾಜಿಕ ಸಂಘಟನೆಗಳ ಮೂಲಕ ಭಟ್ಕಳ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮಾಹಿತಿ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸರ್ಕಾರಿ ಮಟ್ಟದಲ್ಲಿ ಹಸ್ತಕ್ಷೇಪ ಮಾಡಿ ಮಿನಿ ವಿಧಾನ ಸೌಧದಲ್ಲಿ ಆಧಾರ್ ಸೇವೆ ಪುನರಾರಂಭಕ್ಕೆ ಕ್ರಮ ಕೈಗೊಂಡರು.
ಆದರೆ ಲಕ್ಷಾಂತರ ಜನಸಂಖ್ಯೆ ಹೊಂದಿರುವ ಭಟ್ಕಳ ತಾಲ್ಲೂಕಿಗೆ ಕೇವಲ ಎರಡು ಆಧಾರ್ ಕೇಂದ್ರಗಳು ಸಾಲದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಂದು ಪಂಚಾಯತ್ ಕಚೇರಿಗಳಲ್ಲೂ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸುವಂತೆ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ನಾಗೇಂದ್ರ ಕೊಲಾಶೆಟ್ಟಿ ಅವರು, ಮಿನಿ ವಿಧಾನಸೌಧದಲ್ಲಿರುವ ಆಧಾರ್ ಕೇಂದ್ರದಲ್ಲಿ ಪ್ರತಿದಿನ 50ರಿಂದ 60 ಟೋಕನ್ಗಳನ್ನು ವಿತರಿಸಲಾಗುವುದು ಎಂದರು. ತುರ್ತು ಅಗತ್ಯ ಇರುವ ವರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸಣ್ಣ ಪ್ರಮಾಣದ ತಿದ್ದುಪಡಿ ಗಳನ್ನು ಯುಐಡಿಎಐ ಜಾಲತಾಣದ ಮೂಲಕ ಆನ್ಲೈನ್ನಲ್ಲಿಯೂ ಮಾಡಬಹುದೆಂದು ಅವರು ಹೇಳಿದರು.






