Bhatkal | ಅಕ್ರಮ ಜಾನುವಾರು ಸಾಗಾಟ: ನಾಲ್ವರ ಬಂಧನ, 11 ಜಾನುವಾರುಗಳ ರಕ್ಷಣೆ

ಭಟ್ಕಳ: ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ನಾಲ್ವರನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, 11 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಬಂಧಿತರನ್ನು ಗುಜರಾತ್ ಮೂಲದ ವಿಜಯಬಾಯ್ ಜನಕಬಾಯ್ ಮಕ್ಕಾನ, ತೇಜಾಬಾಯ್ ಸಾಜನಬಾಯ್ ಶಿಯಾಲಿಯಾ ಮತ್ತು ದಿಲೀಪ್ ಬಾಯ್ ನಾರ್ದಬಾಯ್ ರಾಠೋಡ್ ಮತ್ತು ಭಟ್ಕಳದ ಕೋಕ್ತಿ ನಗರದ ಮುಹಮ್ಮದ್ ಔಫ್ ಅಬು ಮುಹಮ್ಮದ್ ಹೈದರ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಗೂಡ್ಸ್ ಲಾರಿಯಲ್ಲಿ ಸುಮಾರು 4.60 ಲಕ್ಷ ಮೌಲ್ಯದ 11 ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದರು. ಜಾನುವಾರುಗಳನ್ನು ಪರಸ್ಪರ ಬಿಗಿಯಾಗಿ ಕಟ್ಟಿ, ಮೇವು ಮತ್ತು ನೀರಿನ ಸಮರ್ಪಕ ವ್ಯವಸ್ಥೆ ಮಾಡದೆ ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪಿಎಸ್ಸೈ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಮುರ್ಡೇಶ್ವರ–ಭಟ್ಕಳ ರಸ್ತೆಯಲ್ಲಿ ಲಾರಿಯನ್ನು ತಡೆದು ಪರಿಶೀಲಿಸಿದಾದ ಅಕ್ರಮ ಸಾಗಾಟ ಪತ್ತೆಯಾಗಿದೆ. ಲಾರಿ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ವಿನೋದ್ ಕುಮಾರ್, ಸಂತೋಷ್ ನಾಯ್ಕ, ಕಿರಣ ತಿಳಗಂಜಿ ಮತ್ತು ಮಂಜುನಾಥ ಸಿ. ಖಾರ್ವಿ ಪಾಲ್ಗೊಂಡಿದ್ದರು.
ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






