Bhatkal | ಎಸ್ಐಆರ್ ಪರಿಷ್ಕರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ: ರಾಘವೇಂದ್ರ ಮಡಿವಾಳ

ಭಟ್ಕಳ : ಭಾರತ ಚುನಾವಣಾ ಆಯೋಗದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕಾರ್ಯದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ನಿಖರ ಮತದಾರರ ಪಟ್ಟಿಯ ರೂಪಿಕರಣಕ್ಕೆ ಸಹಕರಿಸಬೇಕು ಎಂದು ಭಟ್ಕಳ ಎಸ್ಐಆರ್ ಮಾಸ್ಟರ್ ಟ್ರೈನರ್ ರಾಘವೇಂದ್ರ ಮಡಿವಾಳ ಕರೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ವೀಪ್ (SVEEP) ಕಾರ್ಯಕ್ರಮದ ಅಂಗವಾಗಿ ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಎಸ್ಐಆರ್ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆಮನೆಗೆ ಭೇಟಿ ನೀಡಿ ವಿತರಿಸುವ ಎರಡು ಪ್ರತಿಗಳ ನಮೂನೆಗಳನ್ನು ಮತದಾರರು ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು ಎಂದು ತಿಳಿಸಿದರು.
ತಪ್ಪು ಮಾಹಿತಿ ದಾಖಲಿಸಿದರೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ ಅರ್ಜಿ ಭರ್ತಿ ಮಾಡುವ ವೇಳೆ ತರಬೇತಿ ಪಡೆದ ಬಿಎಲ್ಒಗಳು ಅಥವಾ ಅಧಿಕೃತ ಸ್ವಯಂಸೇವಾ ಸಂಸ್ಥೆಗಳ ನೆರವು ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿಗಳ ಮೂಲಕ ನೀಡಲಾಗುವ ವಾಸಸ್ಥಳ ಪ್ರಮಾಣಪತ್ರವನ್ನು ಅಗತ್ಯ ದಾಖಲೆಗಳಲ್ಲಿ ಒಂದಾಗಿ ಬಳಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿರುವುದರಿಂದ, ಮತದಾರರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ರಾಜೇಶ್ ಮಹಾಲೆ, ವ್ಯವಸ್ಥಾಪಕ ಕರಿಯಪ್ಪ ನಾಯ್ಕ, ವಿಷಯ ನಿರ್ವಾಹಕ ರಾಘವೇಂದ್ರ ಪೂಜಾರಿ ಹಾಗೂ ಸಂಜೀವಿನಿ ಒಕ್ಕೂಟದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶಾಂತಿಕಾ ನಾಯ್ಕ ಉಪಸ್ಥಿತರಿದ್ದರು.






