UTTARA KANNADA | ಅರಬೈಲ್ ಘಾಟ್ ನಲ್ಲಿ ಎಥೆನಾಲ್ ಸಾಗಾಟದ ಟ್ಯಾಂಕರ್ ಪಲ್ಟಿ: ಬೆಂಕಿಗಾಹುತಿ

ಉತ್ತರ ಕನ್ನಡ: ಎಥೆನಾಲ್ ರಾಸಾಯನಿಕ ಸಾಗಾಟದ ಟ್ಯಾಂಕರ್ ವೊಂದು ಉರುಳಿಬಿದ್ದ ವೇಳೆ ಕಾಣಿಸಿಕೊಂಡ ಬೆಂಕಿಯಿಂದ ಟ್ಯಾಂಕರ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಚಿಕ್ಕೋಡಿಯಿಂದ ಕೇರಳಕ್ಕೆ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಅರಬೈಲ್ ಘಾಟ್ ನ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಉರುಳಿಬಿದ್ದಿದೆ. ಕ್ಷಣಾರ್ಧದಲ್ಲಿ ಟ್ಯಾಂಕರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಮಧ್ಯೆ ಟ್ಯಾಂಕರ್ ಚಾಲಕ ಲಾರಿಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 63ರ ಮಧ್ಯದಲ್ಲೇ ಬೆಂಕಿ ಆವರಿಸಿದ್ದರಿಂದ, ಕೆಲಕಾಲ ಸಂಚಾರವು ಸಂಪೂರ್ಣ ಅಸ್ತವ್ಯಸ್ತಗೊಂಡಿತು
ಅವಘಡದ ಮಾಹಿತಿ ತಿಳಿದ ಕೂಡಲೇ, ಘಟನಾ ಸ್ಥಳಕ್ಕೆ ಧಾವಿಸಿದ ಯಲ್ಲಾಪುರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





