Karwar | ರಸ್ತೆ-ಸೇತುವೆ ಇಲ್ಲದೆ ದೊಡ್ಡಹಿತ್ತಲ್ ಜನರ ಬದುಕು ದುಸ್ತರ

ಕಾರವಾರ: ವಿಶ್ವದ ವಿವಿಧ ದೇಶಗಳಿಗೆ ಗುಣಮಟ್ಟದ ವೀಳ್ಯದೆಲೆ ರಫ್ತು ಮಾಡುವ ಮೂಲಕ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಿತ್ತಲ್ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳಿಗೆ ಸಾರ್ವಜನಿಕ ರಸ್ತೆ ಹಾಗೂ ಹೊಳೆ ದಾಟಲು ಸುರಕ್ಷಿತ ಸೇತುವೆ ಇಲ್ಲ. ಪರಿಣಾಮ, ನಿವಾಸಿಗಳು ತಮ್ಮ ಮನೆಗಳಿಗೆ ತೆರಳಲು ಇಂದಿಗೂ ಖಾಸಗಿ ಜಮೀನಿನ ಮೂಲಕವೇ ಸಂಚರಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಮಳೆಗಾಲ ಆರಂಭವಾದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಸಿದ್ದಾಪುರ ಭಾಗದಲ್ಲಿ ಭಾರೀ ಮಳೆಯಾದಾಗ ಭಾಸ್ಕೇರಿ ಹೊಳೆ ಉಕ್ಕಿ ಹರಿದು ಗ್ರಾಮ ಜಲಾವೃತವಾಗುತ್ತದೆ. ಶಾಲಾ ಮಕ್ಕಳು, ಮಹಿಳೆಯರು ಹಾಗೂ ಉದ್ಯೋಗಸ್ಥರು ಸೊಂಟದಿಂದ ಕುತ್ತಿಗೆಯವರೆಗಿನ ನೀರಿನಲ್ಲಿ ಜೀವದ ಹಂಗು ತೊರೆದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇತ್ತೀಚೆಗೆ ಗ್ರಾಮದ ನಿವಾಸಿಯೊಬ್ಬರ ಅಂತ್ಯಕ್ರಿಯೆ ವೇಳೆ ಶವಪೆಟ್ಟಿಗೆಯನ್ನು ಕುತ್ತಿಗೆಯವರೆಗಿನ ನೀರಿನಲ್ಲಿ ಹೊತ್ತು ಸಾಗಿದ ದೃಶ್ಯ ಸ್ಥಳೀಯರ ನೋವನ್ನು ಮತ್ತಷ್ಟು ಬಿಚ್ಚಿಟ್ಟಿತ್ತು. ನೆರೆ ಬಂದಾಗಲೆಲ್ಲ ದೋಣಿಯ ಮೂಲಕವೇ ಸುರಕ್ಷಿತ ಸ್ಥಳಗಳಿಗೆ ತೆರಳುವುದು ಇಲ್ಲಿನ ಜನರ ವಾರ್ಷಿಕ ಸಂಕಷ್ಟವಾಗಿದೆ.
ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಬಳಸುತ್ತಿರುವ ದಾರಿಯು ಸಾರ್ವಜನಿಕ ಹಕ್ಕಾಗುತ್ತದೆ ಎಂಬುದನ್ನು ಹಾಗೂ ಕಾಲುದಾರಿ ನಾಗರಿಕರ ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದ್ದರೂ, ದೊಡ್ಡಹಿತ್ತಲ್ ನಿವಾಸಿಗಳ ರಸ್ತೆ ಮತ್ತು ಸೇತುವೆ ನಿರ್ಮಾಣದ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.
ಪ್ರತಿ ಮಳೆಗಾಲದಲ್ಲೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡುತ್ತಿದ್ದರೂ, ನೆರೆ ಇಳಿದ ಬಳಿಕ ಭರವಸೆಗಳೂ ಮರೆಯಾಗುತ್ತಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆ ಹಾನಿ ಪರಿಹಾರಕ್ಕೆ ಬಿಡುಗಡೆಯಾಗುವ ಅನುದಾನವನ್ನು ಬಳಸಿಕೊಂಡು ಹಂತ ಹಂತವಾಗಿ ಕಾಲುದಾರಿ ಹಾಗೂ ಕಿರುಸೇತುವೆ ನಿರ್ಮಿಸಿದರೆ ನೂರಾರು ಜನರ ಜೀವಭಯಕ್ಕೆ ತೆರೆ ಬೀಳಲಿದೆ. ಈ ಭಾಗದ ಜನರ ಮೂಲಭೂತ ಹಕ್ಕುಗಳನ್ನು ಸರ್ಕಾರ ಶೀಘ್ರದಲ್ಲೇ ಖಾತ್ರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.






