ಭಟ್ಕಳ: ಕಾಲೇಜಿನ ಲ್ಯಾಬ್ ಸಹಾಯಕ ಶ್ರೀಧರ ಮೊಗೇರ್ ಆತ್ಮಹತ್ಯೆ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಲ್ಯಾಬ್ ಸಹಾಯಕನಾಗಿದ್ದ ಶ್ರೀಧರ ಮೊಗೇರ್ (53), ಕಾಲೇಜಿನ ಪ್ರಾಯೋಗಿಕ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಶ್ರೀಧರ ಬಂದರ್ ಬೆಳ್ನಿ ನಿವಾಸಿಯಾಗಿದ್ದರು. ಮೂಲಗಳ ಪ್ರಕಾರ, ಶ್ರೀಧರ ಕಳೆದ 35 ವರ್ಷಗಳಿಂದ ಈ ಕಾಲೇಜಿನಲ್ಲಿ ಲ್ಯಾಬ್ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬದವರ ಹೇಳಿಕೆಯಂತೆ, ಅವರು ಮಂಗಳವಾರ ರಾತ್ರಿಯಿಂದ ಕಾಣೆಯಾಗಿದ್ದು, ಮನೆಗೆ ಮರಳಿರಲಿಲ್ಲ. ಬುಧವಾರ ಬೆಳಿಗ್ಗೆ ಕಾಲೇಜಿನ ಲ್ಯಾಬ್ನಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಕುಟುಂಬದ ಆಪ್ತ ಮೂಲಗಳ ಪ್ರಕಾರ, ಶ್ರೀಧರ ಅವರಿಗೆ 21 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಅವರು ತಮ್ಮ ಪತ್ನಿಯ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಆದರೆ, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಲಾಗದೇ ಮತ್ತು ಆಭರಣಗಳನ್ನು ಮರಳಿ ಪಡೆಯಲಾಗದೇ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.





