ಭಟ್ಕಳ: ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

ಭಟ್ಕಳ: ಭಟ್ಕಳ ತಾಲೂಕ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ 11ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ತಾಲೂಕಿನ ಬಸ್ತಿಮಕ್ಕಿಯಲ್ಲಿರುವ ಹವ್ಯಕ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಅವರು ಮಾತನಾಡಿ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಇಂದಿನ ಯುವ ಜನತೆಗೆ ಮೂಡಿಸಬೇಕಾಗಿವುದು ಇಂದಿನ ಅಗತ್ಯವಾಗಿದೆ. ನಮ್ಮ ಬಟ್ಟೆ, ಆಹಾರ, ಭಾಷೆ ಪ್ರತಿಯೊಂದರಲ್ಲಿಯೂ ಕೂಡಾ ನಮ್ಮ ಸಂಸ್ಕೃತಿ ಅಡಗಿದ್ದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೋರ್ವರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ತಾಲೂಕ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹಾಗೂ ಮಾಜಿ ಸೈನಿಕ ಎಂ.ವಿ. ಹೆಗಡೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೇಲಿನ ಗಂಟಿಗೆಯ ವೈದಿಕರಾದ ವಿದ್ವಾನ್ ಸುಬ್ರಹ್ಮಣ್ಯ ವಿಶ್ವೇಶ್ವರ ಭಟ್ಟ ಅವರು ಮಾತನಾಡಿ ಕಲಿಯುಗದಲ್ಲಿ ಸಂಘ ಶಕ್ತಿಗೆ ಮಹತ್ವನ್ನು ನೀಡಲಾ ಗಿದೆ. ಸಂಘಟನೆಯನ್ನು ರಚಿಸಿಕೊಂಡು ನೌಕರರ ಕ್ಷೇಮ ಮತ್ತು ಅಭಿವೃದ್ಧಿಯನ್ನು ಬಯಸುತ್ತಿರುವ ಈ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳುನ್ನು ಗುರುತಿಸುವ ಕಾರ್ಯ ಒಂದು ಉತ್ತಮ ಕಾರ್ಯವಾಗಿದೆ ಎಂದ ಅವರು ಕೇವಲ ವಿದ್ಯಾವಂತರಾದಷ್ಟೇ ಸಾಲದು, ಸುಸಂಸ್ಕೃತ ರಾಗುವುದು ಮುಖ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶಿರಾಲಿ ಜನತಾ ವಿದ್ಯಾಲಯದ ಪ್ರಾಂಶುಪಾಲ ಜಿ.ಎಸ್.ಹೆಗಡೆ ಮಾತನಾಡಿ ಹವ್ಯಕರ ಜನ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಮ್ಮಲ್ಲಿ ಮದುವೆಯ ವಯಸ್ಸು ಹೆಚ್ಚುತ್ತಿರುವುದೇ ಇದಕ್ಕೆ ಕಾರಣವಾಗಿದ್ದು ಪ್ರತಿಯೊರ್ವ ತಂದೆ ತಾಯಿಯರು ಯೋಚಿಸಬೇ ಕಾದ ಸಮಯ ಇದಾಗಿದೆ. ನಾವು ನಮ್ಮ ಉಡುಗೆ, ತೊಡುಗೆ, ಆಹಾರ, ವಿಹಾರದಲ್ಲಿ ನಮ್ಮ ತನವನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಇಂದು ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದೂ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಲಹಾ ಸಮಿತಿ ಮಾರ್ಗದರ್ಶಕ ಶಂಭು ಎನ್. ಹೆಗಡೆ, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು. ಸಂಘದ ಉಪಾಧ್ಯರುಗಳಾದ ಸುಧಾ ಭಟ್ಟ ಹಾಗೂ ಜಿ.ಟಿ. ಭಟ್ಟ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2014ಕ್ಕೂ ಪೂರ್ವ ನಿವೃತ್ತರಾದ ನೌಕರರನ್ನು, 2024-25ನೇ ಸಾಲಿನಲ್ಲಿ ನಿವೃತ್ತರಾದವರು, ವಿವಿಧ ಸಾಧನೆಗಾಗಿ ಜಿಲ್ಲಾ-ರಾಜ್ಯ ಮಟ್ಟದಲ್ಲಿ ಸನ್ಮಾನಿತರಾದವರನ್ನು ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ವಿದ್ಯಾ ಭಟ್ಟ ಪ್ರಾರ್ಥಿಸಿದರು. ಶಿಕ್ಷಕ ಐ.ವಿ.ಹೆಗಡೆ ಹಾಗೂ ಕೆ.ಬಿ. ಹೆಗಡೆ ನಿರ್ವಹಿಸಿದರು. ಶಿಕ್ಷಕ ಗಣೇಶ ಯಾಜಿ ಸ್ವಾಗತಿಸಿದರು. ಕೆ.ಬಿ. ಹೆಗಡೆ ವರದಿ ವಾಚಿಸಿದರು. ನ್ಯೂ ಇಂಗ್ಲೀಷ್ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಶಿರೂರು ವಂದಿಸಿದರು.







