ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ; ವಿದ್ಯುತ್ ಉತ್ಪಾದನೆ, ಕುಡಿಯುವ ನೀರಿಗೆ ಆತಂಕ

ಭಟ್ಕಳ: ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರೂ ರಾಜ್ಯದ ಪ್ರಮುಖ ಜಲವಿದ್ಯುತ್ ಯೋಜನೆಯಾದ ಲಿಂಗನಮಕ್ಕಿ ಜಲಾಶಯ ನಿರೀಕ್ಷಿತ ಮಟ್ಟದಲ್ಲಿ ಭರ್ತಿಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಜಲವಿದ್ಯುತ್ ಉತ್ಪಾದನೆ, ನೀರಾವರಿ ಹಾಗೂ ಕುಡಿಯುವ ನೀರಿನ ಲಭ್ಯತೆ ಕುರಿತು ಕಳವಳ ಹೆಚ್ಚಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿಯ ಮೇಲಿರುವ ಲಿಂಗನಮಕ್ಕಿ ಜಲಾಶಯವು ಕರಾವಳಿ ಭಾಗದ ಭಟ್ಕಳದಿಂದ ಸುಮಾರು 110 ಕಿ.ಮೀ. ದೂರದಲ್ಲಿದೆ. ಕರ್ನಾಟಕದ ಅತಿದೊಡ್ಡ ಜಲವಿದ್ಯುತ್ ಜಲಾಶಯ ವಾಗಿರುವ ಇದು ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಮಂಗಳವಾರದ ಅಂಕಿ-ಅಂಶಗಳ ಪ್ರಕಾರ ಜಲಾಶಯದಲ್ಲಿ ನೀರಿನ ಮಟ್ಟ 1,773.15 ಅಡಿ ದಾಖಲಾಗಿದ್ದು, ಕಳೆದ ವರ್ಷದ ಇದೇ ದಿನಾಂಕಕ್ಕೆ ಅದು 1,810.50 ಅಡಿ ಇತ್ತು. ಅಂದರೆ, ಈ ವರ್ಷ ನೀರಿನ ಮಟ್ಟ 37.35 ಅಡಿ ಕಡಿಮೆ ಯಾಗಿದೆ. ಕಳೆದ ವರ್ಷ ಜುಲೈ ಅಂತ್ಯದ ವೇಳೆಗೆ ಜಲಾಶಯವು ತನ್ನ ಒಟ್ಟು ಸಾಮರ್ಥ್ಯದ 82.12 ಶೇಕಡಾ ಭರ್ತಿಯಾಗಿದ್ದರೆ, ಈ ಬಾರಿ ಕೇವಲ 29.03 ಶೇಕಡಾ ಮಾತ್ರ ನೀರು ಸಂಗ್ರಹವಾಗಿದೆ.
ಸಾಮಾನ್ಯವಾಗಿ ಜುಲೈ ಕೊನೆಯ ವಾರದ ವೇಳೆಗೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,815 ಅಡಿಯನ್ನು ಮೀರುತ್ತದೆ. ಹೆಚ್ಚುವರಿ ನೀರನ್ನು ಹೊರಹರಿಸಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಎರಡನೇ ಎಚ್ಚರಿಕೆ ಸೂಚನೆ ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಲವಾರು ವರ್ಷಗಳಲ್ಲಿ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲೇ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕೆಲವು ಸಂದರ್ಭಗಳಲ್ಲಿ 1,819 ಅಡಿ ಮಟ್ಟ ತಲುಪಿದ ಬಳಿಕ ನೀರು ಹೊರಬಿಡಲಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.
ಮಳೆಯ ಕೊರತೆಯೇ ಪ್ರಮುಖ ಕಾರಣ
ಜಲಾಶಯದ ಕ್ಯಾಚ್ಮೆಂಟ್ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿರುವುದು ನೀರಿನ ಕೊರತೆಗೆ ಪ್ರಮುಖ ಕಾರಣವಾಗಿದೆ. ಈ ಭಾಗಗಳಲ್ಲಿ ಮೋಡಗಳ ಪ್ರಮಾಣವೂ ಕಡಿಮೆಯಿರುವುದಾಗಿ ವರದಿಗಳು ತಿಳಿಸಿವೆ.
ಮಳೆಯ ಕೊರತೆ ಮುಂದುವರಿದರೆ ವಿದ್ಯುತ್ ಉತ್ಪಾದನೆಗೆ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಗತ್ಯವಿದ್ದರೆ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ಸೇರಿದಂತೆ ಪರ್ಯಾಯ ಕ್ರಮಗಳನ್ನು ಪರಿಗಣಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಜಲವಿದ್ಯುತ್ ಉತ್ಪಾದನೆಗೆ ಹೊಡೆತ
ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಜಲವಿದ್ಯುತ್ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಪರ್ಯಾಯವಾಗಿ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವುದೂ ಸುಲಭವಲ್ಲ. ರಾಯಚೂರು ಹಾಗೂ ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರಗಳಿಗೂ ನೀರಿನ ಕೊರತೆ ಎದುರಾಗಿರುವ ಕಾರಣ ಉತ್ಪಾದನೆ ಹೆಚ್ಚಿಸುವುದು ಸವಾಲಾಗಿದೆ.
ಸೌರ ವಿದ್ಯುತ್ ಉತ್ಪಾದನೆ ಸೀಮಿತವಾಗಿದ್ದು, ರಾತ್ರಿ ವೇಳೆ ಅದರಿಂದ ವಿದ್ಯುತ್ ಲಭ್ಯವಾಗುವುದಿಲ್ಲ. ಹೊಸ ಅಣು ವಿದ್ಯುತ್ ಯೋಜನೆಗಳಿಗೆ ಪರಿಸರವಾದಿಗಳ ವಿರೋಧವೂ ಇದೆ. ಖಾಸಗಿ ಸಂಸ್ಥೆಗಳಿಂದ ದುಬಾರಿ ದರದಲ್ಲಿ ವಿದ್ಯುತ್ ಖರೀದಿಸುವ ಅವಕಾಶವಿದ್ದರೂ, ಅದು ರಾಜ್ಯದ ಸಂಪೂರ್ಣ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಂಪ್ಡ್ ಸ್ಟೋರೇಜ್ ಯೋಜನೆಗೆ ಒತ್ತು
ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಲು ಪಂಪ್ಡ್ ಸ್ಟೋರೇಜ್ ಹೈಡ್ರೋ ಪವರ್ ಯೋಜನೆಗಳು ಪರಿಣಾಮಕಾರಿ ಪರಿಹಾರವಾಗಬಹುದು ಎಂದು ಕೆಪಿಸಿಎಲ್ ಪರಿಗಣಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಬಳಕೆಯಾದ ನೀರನ್ನು ಮರುಸಂಗ್ರಹಿಸಿ ಅಗತ್ಯವಿದ್ದಾಗ ಮತ್ತೆ ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ.
ರಾಜ್ಯದ ವಿದ್ಯುತ್ ಹಾಗೂ ನೀರಾವರಿಗೆ ಆತಂಕ
ಲಿಂಗನಮಕ್ಕಿ ಸೇರಿದಂತೆ ರಾಜ್ಯದ ಪ್ರಮುಖ ಜಲವಿದ್ಯುತ್ ಯೋಜನೆಗಳು ಕರ್ನಾಟಕದ ಒಟ್ಟು ವಿದ್ಯುತ್ ಅಗತ್ಯದ 30ರಿಂದ 40 ಶೇಕಡಾ ಭಾಗವನ್ನು ಕಡಿಮೆ ವೆಚ್ಚದಲ್ಲಿ ಪೂರೈಸುತ್ತಿವೆ. ಇದೇ ಜಲಾಶಯಗಳು ರೈತರ ಕೃಷಿ ಭೂಮಿಗಳಿಗೆ ನೀರಾವರಿ ನೀರನ್ನೂ ಒದಗಿಸುತ್ತವೆ.
ಆದರೆ, ಬಹುತೇಕ ಎಲ್ಲ ಪ್ರಮುಖ ಜಲಾಶಯಗಳ ಕ್ಯಾಚ್ಮೆಂಟ್ ಪ್ರದೇಶಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿರುವುದರಿಂದ, ಕುಡಿಯುವ ನೀರಿನ ಸಂಗ್ರಹಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕೆಲವು ಜಲವಿದ್ಯುತ್ ಯೋಜನೆಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಜ್ಞರ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾದರೂ ಈಗ ಉಂಟಾಗಿರುವ ಕೊರತೆಯನ್ನು ಸಂಪೂರ್ಣ ವಾಗಿ ನೀಗಿಸುವುದು ಸುಲಭವಲ್ಲ. ಮಳೆಯ ಕೊರತೆ ಇದೇ ರೀತಿ ಮುಂದುವರಿದರೆ ರಾಜ್ಯವು ತೀವ್ರ ಬರ ಪರಿಸ್ಥಿತಿ ಯನ್ನು ಎದುರಿಸಬೇಕಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.






