ನಮಗೆ ಮುಸ್ಲಿಮರು ಅಥವಾ ಕ್ರೈಸ್ತರಿಂದ ಅಪಾಯ ಬಂದಿಲ್ಲ: ಅನಂತ್ ಕುಮಾರ್ ಹೆಗಡೆ

ಭಟ್ಕಳ: ಹಿಂದೂ ಧರ್ಮವು ಇಂದು ಜಾತಿ-ಜಾತಿಯಲ್ಲಿ ಬಿದ್ದು ಹೊರಳಾಡುತ್ತಿದೆ. ನಮಗೆ ಮುಸ್ಲಿಮರು ಅಥವಾ ಕ್ರೈಸ್ತರಿಂದ ಅಪಾಯ ಬಂದಿಲ್ಲ, ಬದಲಾಗಿ ನಮ್ಮೊಳಗಿನವರಿಂದಲೇ ನಮಗೆ ಹೆಚ್ಚಿನ ಅಪಾಯ ಎದುರಾಗಿದೆ ಎಂದು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ನಗರದಲ್ಲಿ ಆಯೋಜಿಸಲಾಗಿದ್ದ 'ಹಿಂದೂ ಸಂಗಮ' ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಮಾಜವನ್ನು ಕಾಡುತ್ತಿರುವ ಜಾತಿ ಪದ್ಧತಿಯ ವಿರುದ್ಧ ವಾಗ್ದಾಳಿ ನಡೆಸಿದರು.
ವೇದಿಕೆಗಳಲ್ಲಿ ಒಗ್ಗಟ್ಟಿನ ಮಾತುಗಳನ್ನಾಡುತ್ತೇವೆ, ಆದರೆ ಅಲ್ಲಿಂದ ಹೊರಹೋದ ತಕ್ಷಣ ಜಾತಿ ಹುಳ ನಮ್ಮ ತಲೆಯಲ್ಲಿ ತುಂಬಿಕೊಂಡು ತಿನ್ನಲು ಶುರು ಮಾಡುತ್ತದೆ. ಇದಕ್ಕಿಂತ ದೊಡ್ಡ ವಿಷದ ಚಿಂತನೆ ಮತ್ತೊಂದಿಲ್ಲ ಎಂದು ಹೇಳಿದರು.
ಹಿಂದೂ ಸಮಾಜದ ಹಿನ್ನಡೆಗೆ ಹೊರಗಿನ ಶಕ್ತಿಗಳಿಗಿಂತ ಆಂತರಿಕ ದ್ರೋಹವೇ ಕಾರಣ ಎಂದು ವಿಶ್ಲೇಷಿಸಿದ ಅವರು, "ಮುಸಲ್ಮಾನರಾಗಲಿ, ಕ್ರೈಸ್ತರಾಗಲಿ ನಮ್ಮನ್ನು ಸೋಲಿಸಲು ಸಾಧ್ಯವಿರಲಿಲ್ಲ. ಆದರೆ ಇತಿಹಾಸದುದ್ದಕ್ಕೂ ನಮ್ಮವರೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಿತ್ತೂರು ಚೆನ್ನಮ್ಮನನ್ನು ಬ್ರಿಟಿಷರು ಸೋಲಿಸಲಿಲ್ಲ, ಬದಲಾಗಿ ಮಲ್ಲಪ್ಪ ಶೆಟ್ಟಿ ಸೋಲಿಸಿದ. ಸಮಾಜವನ್ನು ಒಡೆದಿದ್ದು ಜಯಚಂದ್ರನೇ ಹೊರತು ಅನ್ಯರಲ್ಲ" ಎಂದರು.
"ನಮ್ಮ ಯಾವುದೇ ಧರ್ಮಗ್ರಂಥಗಳಲ್ಲಿ ಜಾತಿ ವ್ಯವಸ್ಥೆಯ ಉಲ್ಲೇಖವಿಲ್ಲ. ನದಿ ಹರಿಯುವಾಗ ಕೊಳಕು ಸೇರಿ ಕೊಂಡಂತೆ, ಕಾಲಕ್ರಮೇಣ ಜಾತಿ ಎಂಬ ಕೊಳಕು ನಮ್ಮಲ್ಲಿ ಸೇರಿಕೊಂಡಿದೆ. ಅದನ್ನು ಸ್ವಚ್ಛಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಪ್ರಸ್ತುತ ಕಾಲಘಟ್ಟದಲ್ಲಿ ಕೇವಲ ತಮ್ಮ ಜಾತಿಯವರನ್ನು ಮಾತ್ರ ಗೌರವಿಸುವ 'ಜಾತಿ ಸಮ್ಮೇಳನಗಳು' ಫ್ಯಾಶನ್ ಆಗಿರುವುದು ಸಮಾಜದ ಏಕತೆಗೆ ಮಾರಕ ಎಂದು ಅವರು ಅಭಿಪ್ರಾಯಪಟ್ಟರು.
ಆರ್ಎಸ್ಎಸ್ ನೂರು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಭಾರತವು ಜಗತ್ತಿನ 'ಗುರು'ವಾಗಿ ಹೊರ ಹೊಮ್ಮುತ್ತಿದೆ. ಈ ಹಿಂದೆ ನಮ್ಮನ್ನು ಹಾವಾಡಿಗರ ದೇಶ ಎಂದು ಜರಿಯುತ್ತಿದ್ದ ಜಗತ್ತು ಇಂದು ಯೋಗ ಮತ್ತು ಆಯುರ್ವೇದವನ್ನು ಅಪ್ಪಿಕೊಳ್ಳುತ್ತಿದೆ. ಐನ್ಸ್ಟೀನ್ ನಂತಹ ವಿಜ್ಞಾನಿಗಳೂ ಭಾರತದ ಗಣಿತದ ಶ್ರೇಷ್ಠತೆಯನ್ನು ಒಪ್ಪಿಕೊಂಡಿದ್ದಾರೆ. ಇಂತಹ ಶ್ರೇಷ್ಠ ಪರಂಪರೆ ಇರುವ ನಾವು ಜಾತಿಯ ಸಂಕೋಲೆಯಿಂದ ಹೊರಬಂದು ಶಕ್ತಿಶಾಲಿಯಾಗಿ ಎದ್ದು ನಿಲ್ಲಬೇಕಿದೆ ಎಂದು ಕರೆ ನೀಡಿದರು.
ಬಂಟ್ವಾಳದ ಮಾಣಿಲದ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮಿಜಿ ಹಿಂದೂ ಸಮಾವೇಶದ ಸಾನಿಧ್ಯ ವಹಿಸಿದ್ದರು. ನಗರ ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಶ್ರೀಧರ್ ನಾಯ್ಕ, ನಾಗಯಕ್ಷೆಯ ಧರ್ಮದರ್ಶಿ ರಾಮದಾಸ್ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.







