ಬಿಎಸ್ವೈ ಅಭಿಮಾನೋತ್ಸವ ಹಿನ್ನೆಲೆ : ಹೊಸಪೇಟೆಯಲ್ಲಿ ಬಸ್ ಸಂಚಾರ ಅಸ್ತವ್ಯಸ್ತ

ಹೊಸಪೇಟೆ / ವಿಜಯನಗರ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ “50 ವರ್ಷದ ರಾಜಕೀಯ ಸಾರ್ಥಕ ಜೀವನ” ಅಂಗವಾಗಿ ಚಿತ್ರದುರ್ಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ಹಿನ್ನೆಲೆ ವಿಜಯನಗರ ಜಿಲ್ಲೆಯ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ ಘಟನೆ ಶನಿವಾರ ಕಂಡುಬಂದಿತು.
ಸಾಮಾನ್ಯ ದಿನಗಳಲ್ಲಿ ಹೊಸಪೇಟೆಯಿಂದ ಬಳ್ಳಾರಿ ಮಾರ್ಗಕ್ಕೆ ಐದು ರಿಂದ ಹತ್ತು ನಿಮಿಷಕ್ಕೊಮ್ಮೆ ಬಸ್ ಸೌಲಭ್ಯ ಲಭ್ಯವಿರುತ್ತದೆ. ಆದರೆ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಗಳನ್ನು ನಿಯೋಜಿಸಿರುವ ಕಾರಣ ಎರಡು ಗಂಟೆಗಳಾದರೂ ಒಂದು ಬಸ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದಲೇ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ವಯೋವೃದ್ಧರು, ಗರ್ಭಿಣಿಯರು ಹಾಗೂ ಆಸ್ಪತ್ರೆಗಳಿಗೆ ತೆರಳಬೇಕಿದ್ದ ರೋಗಿಗಳು ಪರದಾಡುತ್ತಿರುವ ದೃಶ್ಯ ಕಂಡುಬಂತು. ನಿಗದಿತ ಸ್ಥಳಗಳಿಗೆ ತೆರಳಬೇಕಿದ್ದವರು ಗಂಟೆಗಟ್ಟಲೆ ಕಾಯುವಂತಾಯಿತು.
“ರಾಜಕಾರಣಿಗಳ ಸಂಭ್ರಮ ಒಂದೆಡೆ ನಡೆಯುತ್ತಿದ್ದರೆ ಸಾರ್ವಜನಿಕರ ಗೋಳು ಕೇಳುವವರು ಯಾರು?” ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಬಸ್ಗಳ ಕೊರತೆಯಿಂದ ಹೊಸಪೇಟೆ ಬಸ್ ನಿಲ್ದಾಣ ಬಹುತೇಕ ಬಿಕೋ ಎನ್ನುತ್ತಿದ್ದು, ಜನರು ಅನಿವಾರ್ಯವಾಗಿ ಖಾಸಗಿ ಟ್ರಾವೆಲ್ಸ್, ಆಟೋ ಹಾಗೂ ಖಾಸಗಿ ಬಸ್ಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭವನ್ನು ಬಳಸಿಕೊಂಡ ಕೆಲ ಖಾಸಗಿ ವಾಹನ ಚಾಲಕರು ಪ್ರಯಾಣ ದರ ಹೆಚ್ಚಿಸಿರುವುದಾಗಿ ಪ್ರಯಾಣಿಕರು ಆರೋಪಿಸಿದರು.
“ಸಾರ್ವಜನಿಕರ ಸೇವೆಗೆ ಇರುವ ಸರ್ಕಾರಿ ಬಸ್ಗಳನ್ನು ಖಾಸಗಿ ಕಾರ್ಯಕ್ರಮಗಳಿಗೆ ಬಳಸುವುದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗೆ, ಕಾರ್ಮಿಕರು ಕೆಲಸಕ್ಕೆ, ರೋಗಿಗಳು ಆಸ್ಪತ್ರೆಗೆ ಹೋಗಲು ಸಂಕಷ್ಟ ಎದುರಾಗಿದೆ. ಯಾವ ರಾಜಕೀಯ ಪಕ್ಷವಾದರೂ ಇಂತಹ ಸಂದರ್ಭಗಳಲ್ಲಿ ಬಲಿಯಾಗುವುದು ಬಡವರು ಮತ್ತು ವಿದ್ಯಾರ್ಥಿಗಳೇ” ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷವಾಗಿ ಬಳ್ಳಾರಿ, ಕುರುಗೋಡು, ಸಂಡೂರು ಹಾಗೂ ಕಂಪ್ಲಿ ಮಾರ್ಗಗಳಲ್ಲಿಯೂ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಕ್ರಮದ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ಹೊರಹಾಕಿದರು.
ಇಂತಹ ಕಾರ್ಯಕ್ರಮಗಳಿಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಬಾರದು. ಸಾರ್ವಜನಿಕರ ಅನುಕೂಲತೆ ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ ತುರ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






