Harapanahalli | ಮನರೇಗಾ ಬದಲು ‘ವಿಕಸಿತ ಭಾರತ-ಜಿ ರಾಮ್ ಜಿ’ ಯೋಜನೆ ಜಾರಿ: ಇಒ ಚಂದ್ರಶೇಖರ್

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಉದ್ಯೋಗ ಭದ್ರತೆ, ಜಲಸಂರಕ್ಷಣೆ ಹಾಗೂ ಆಸ್ತಿ ಸೃಜನೆಗೆ ಜಾರಿಯಲ್ಲಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಬದಲಾಗಿ, ವಿಕಸಿತ ಭಾರತ-ಜಿ ರಾಮ್ ಜಿ ಕಾಯ್ದೆ–2025 ಜುಲೈ 1ರಿಂದ ದೇಶಾದ್ಯಂತ ಜಾರಿಯಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ್ ವೈ.ಎಚ್. ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು, ಹೊಸ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಆರ್ಥಿಕ ವರ್ಷದಲ್ಲಿ 125 ದಿನಗಳ ಕೌಶಲ್ಯರಹಿತ ಕೂಲಿ ಉದ್ಯೋಗಕ್ಕೆ ಶಾಸನಬದ್ಧ ಖಾತರಿ ನೀಡಲಾಗುತ್ತದೆ. ಗ್ರಾಮೀಣ ಅಭಿವೃದ್ಧಿಯನ್ನು ವಿಕಸಿತ ಭಾರತ–2047 ಗುರಿಯೊಂದಿಗೆ ಜೋಡಿಸಿ ಉತ್ಪಾದಕ ಆಸ್ತಿಗಳ ಸೃಷ್ಟಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಳೆಯ ಯೋಜನೆಯಡಿ ಬಾಕಿ ಇರುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊಸ ಕಾಯ್ದೆಯ ನಿಯಮಗಳ ಪ್ರಕಾರವೇ ಮುಂದುವರಿಸಿ ಪೂರ್ಣಗೊಳಿಸಲಾಗುತ್ತದೆ. ಸಾರ್ವಜನಿಕ ಹಾಗೂ ಸಮುದಾಯ ಆಸ್ತಿಗಳ ಕಾಮಗಾರಿಗಳು ಅಪೂರ್ಣವಾಗದಂತೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
ಹೊಸ ಉದ್ಯೋಗ ಖಾತರಿ ಕಾರ್ಡ್ಗಳು ವಿತರಿಸುವವರೆಗೆ, ಇ-ಕೆವೈಸಿ ಪೂರ್ಣಗೊಂಡಿರುವ ಹಳೆಯ ಜಾಬ್ ಕಾರ್ಡ್ಗಳನ್ನೇ ಮಾನ್ಯವಾಗಿ ಪರಿಗಣಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರನ್ನು ಹೊಂದಿರುವ ಪ್ರತಿಯೊಂದು ಕುಟುಂಬವೂ ಯೋಜನೆಯ ಪ್ರಯೋಜನ ಪಡೆಯಲು ಅರ್ಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಳೆಯ ಜಾಬ್ ಕಾರ್ಡ್ ಇಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ಹೆಸರು, ವಯಸ್ಸು ಹಾಗೂ ವಿಳಾಸದ ವಿವರ ನೀಡಿ ಹೊಸ ಕಾರ್ಡ್ಗೆ ನೋಂದಾಯಿಸಿಕೊಳ್ಳಬಹುದು. ಉದ್ಯೋಗಕ್ಕಾಗಿ ಗ್ರಾಮ ಪಂಚಾಯಿತಿ, ಕಾರ್ಯಕ್ರಮ ಅಧಿಕಾರಿಗಳು ಅಥವಾ ಅಧಿಕೃತ ಸಿಬ್ಬಂದಿಗೆ ಮೌಖಿಕವಾಗಿ, ಲಿಖಿತವಾಗಿ ಅಥವಾ ಡಿಜಿಟಲ್ ವೇದಿಕೆಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.






