ಹರಪನಹಳ್ಳಿ| ನಾಳೆ (ಜೂ.1) ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ 'ತಳಿರು-ತೋರಣ'ದ ಸ್ವಾಗತ

ಹರಪನಹಳ್ಳಿ: ಶಾಲೆಗಳಲ್ಲಿ 2026-27ನೇ ಸಾಲಿಗೆ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಳಿರು-ತೋರಣಗಳನ್ನು ಕಟ್ಟಿ ಚಿಣ್ಣರನ್ನು ಬರಮಾಡಿಕೊಳ್ಳಲು ಶಾಲೆಗಳೆಲ್ಲ ಸಜ್ಜಾಗುತ್ತಿವೆ. ಬೇಸಿಗೆ ರಜೆ ಮುಗಿದಿದ್ದು, ನಾಳೆಯಿಂದ ಕೆಲವೆಡೆ 'ಶೈಕ್ಷಣಿಕ ಕಲರವ' ಆರಂಭಗೊಳ್ಳಲಿದೆ.
ತಾಲೂಕಿನಲ್ಲಿ 264 ಸರ್ಕಾರಿ ಪ್ರಾಥಮಿಕ ಹಾಗೂ 25 ಪ್ರೌಢಶಾಲೆಗಳಿವೆ.29 ಅನುದಾನಿತ ಶಾಲೆಗಳಿವೆ.ಇವೆಲ್ಲವೂ ಏಕಕಾಲದಲ್ಲಿ ಶೈಕ್ಷಣಿಕ ವರ್ಷಾರಂಭ ಮಾಡಲಿವೆ.ಇದಕ್ಕಾಗಿ ಶಿಕ್ಷಕರು ಶಾಲಾ ಹಂತದಲ್ಲಿ ದಾಖಲಾತಿ ಅಂದೋಲನ ನಡೆಸಿದ್ದು, 1ನೇ, 6ನೇ ಹಾಗೂ 8ನೇ ತರಗತಿಗೆ ಕೆಲವು ಕಡೆ ಹೆಚ್ಚಿನ ಮಟ್ಟದಲ್ಲಿ ದಾಖಲಾತಿ ಜಾಸ್ತಿಯಾಗಿದ್ದು,ಈ ಮಕ್ಕಳಿಗೆ ಸರ್ಕಾರದಿಂದ ಸವಲತ್ತುಗಳನ್ನು ಕಲ್ಪಿಸುವುದಕ್ಕೂ ತಯಾರಿ ಮಾಡಿಕೊಳ್ಳಲಾಗಿದೆ.
ಶಾಲೆಗಳ ಪ್ರಾರಂಭೋತ್ಸವ ನಾಳೆಯಿಂದ ನಡೆಯಲಿದ್ದು, ನಾಳೆ ಸಿಹಿ ನೀಡುವುದರ ಮೂಲಕ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಗುವುದು.ಇಲಾಖೆಯಿಂದ ಶೇ 100ರಷ್ಟು ಪಠ್ಯ ಪುಸ್ತಕಗಳು ಈಗಾಗಲೇ ಬಂದಿದ್ದು, ಎಲ್ಲಾ ಶಾಲೆಗಳಿಗೆ ತಲುಪಿಸುವ ಕಾರ್ಯ ನಡೆದಿದೆ.ತಾಲೂಕಿನ ಎಲ್ಲಾ ಕ್ಲಸ್ಟರ್ ಮಟ್ಟದಲ್ಲಿ ಸಮವಸ್ತ್ರವನ್ನ ತಲುಪಿಸಲಾಗಿದೆ ಎಂದು ಬಿಇಓ ಹೆಚ್.ಲೇಪಕ್ಷಾಪ್ಪ ತಿಳಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಈಗಾಗಲೇ ತರಗತಿಗಳು ಆರಂಭಗೊಂಡಿವೆ. ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ- ಗಳು, ಶೂ-ಸಾಕ್ಸ್, ಸಮವಸ್ತ್ರವನ್ನು ಸರ್ಕಾರದಿಂದಲೇ ಉಚಿತವಾಗಿ ನೀಡಲಾಗುತ್ತದೆ. ಆದರೆ, ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಿರುವವರು ತಾವಾಗಿಯೇ ಖರೀದಿಸಬೇಕು. ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಬ್ಯಾಗ್ಗಳು, ಶೂ, ಸಮವಸ್ತ್ರ ಮೊದಲಾದವುಗಳ ಬೆಲೆ ಸರಾಸರಿ ಶೇ 15ರಿಂದ ಶೇ 20ರಷ್ಟು ಏರಿಕೆ ಆಗಿರುವುದು ಮಕ್ಕಳ ಪೋಷಕರಿಗೆ 'ಹೊರೆ'ಯಾಗಿ ಪರಿಣಮಿಸಿದೆ.
ಶಾಲೆಗಳಲ್ಲಿ ಬಿಸಿಯೂಟ ಮೊದಲ ದಿನದಿಂದಲೇ ಆರಂಭಿಸಲು ಉದ್ದೇಶಿಸಲಾಗಿದೆ.ಪಶ್ಚಿಮ ಏಷ್ಯಾದಲ್ಲಿ ನಡೆದಿರುವ ಸಂಘರ್ಷದ ಕಾರಣದಿಂದ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು 'ಬಿಸಿಯೂಟ ತಯಾರಿ ಮೇಲೆ ಪರಿಣಾಮಬೀರುವ ಆತಂಕ ಎದುರಾಗಿದೆ. 'ಕೆಲವು ದೊಡ್ಡಶಾಲೆಗಳಿಗೆ ಅಡುಗೆ ಅನಿಲ ಸಿಲಿಂಡರ್ ಕೊರತೆ ಆತಂಕ ಉಂಟಾಗುವ ಸಾಧ್ಯತೆ ಇದೆ. ಇದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ,ಮತ್ತು ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿ,ತಹಸೀಲ್ದಾರರು ಸಮಸ್ಯೆ ಪರಿಹರಿಸುವಂತೆ ಏಜೆನ್ಸಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ಎಚ್.ಲೇಪಕ್ಷಾಪ್ಪ ತಿಳಿಸಿದ್ದಾರೆ.
ಸರ್ಕಾರಿ ಈ ರೀತಿ ಸೌಲಭ್ಯ ನೀಡಿದ ಮೇಲೂ ಸ್ಥಳೀಯವಾಗಿ ಕೆಲವೊಂದು ಶಾಲೆಗಳು ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಶಿಕ್ಷಣ ಪ್ರೇಮಿಗಳಿಂದ, ಗ್ರಾಮಸ್ಥರು, ಮತ್ತು ದಾನಿಗಳಿಂದ ಉಚಿತ ಬ್ಯಾಗ್ ಮತ್ತು ದಾಖಲಾಗುವ ವಿದ್ಯಾರ್ಥಿಗಳ ಹೆಸರಿನಲ್ಲಿ 1 ಸಾವಿರ ಹಣ ನಿಶ್ತಿತ ಠೇವಣಿ ಇಡುವುದು ಸೇರಿದಂತೆ ಮುಂತಾದ ಸೌಲಭ್ಯ ನೀಡಲು ಮುಂದಾಗಿವೆ. ಈ ಕುರಿತು ಕೆಲವು ಕಡೆ ವಿಶೇಷ ದಾಖಲಾತಿ ಆಂದೋಲನವನ್ನೂ ನಡೆಸಿದ್ದೇವೆ' ಎಂದು ಎಚ್ ಲೇಪಕ್ಷಾಪ್ಪ ಮಾಹಿತಿ ನೀಡಿದರು.
‘ನೂರಕ್ಕೆ ನೂರು ಹಾಜರಾತಿ ದಾಖಲಾತಿ,ಗುಣಮಟ್ಟದ ಕಲಿಕೆ ಸೇರಿದಂತೆ ಹಲವು ಸೌಲಭ್ಯಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ದೊರಕುತ್ತಿವೆ,ಸ್ಥಳೀಯ ಶಾಸಕರು ಸಹ ಶಿಕ್ಷಣಕ್ಕೆ ಒಲವು ತೋರಿಸುತ್ತಿರುವುದು ಶೈಕ್ಷಣಿಕವಾಗಿ ಸಹಕಾರಿಯಾಗಿದೆ.ಕಳೆದ ಭಾರಿ 10ನೇ ತರಗತಿಯ ಫಲಿತಾಂಶದಲ್ಲಿ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು,ಪೋಷಕರು ತಪ್ಪದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ‘.
ಎಚ್. ಲೇಪಕ್ಷಾಪ್ಪ-ಬಿಇಒ ಹರಪನಹಳ್ಳಿ
’ಶಾಲಾ ಕಟ್ಟಡ, ಅಡುಗೆ ಮನೆ, ಬಿಸಿಯೂಟ ಕೊಠಡಿ ಒಳಾಂಗಣ- ಹೊರಾಂಗಣ ಸ್ವಚ್ಛಗೊಳಿಸಲಾಗಿದೆ. ಜೂನ್ 1ರಿಂದ ಅಧಿಕೃತ ಶಾಲಾ ಪ್ರಾರಂಭಕ್ಕೆ ಎಸ್ಡಿಎಂಸಿಯವರು, ಗ್ರಾಮಸ್ಥರು, ಪೋಷಕರನ್ನು ಆಹ್ವಾನಿಸಲಾಗುವುದು. ತಳಿರು-ತೋರಣ ಕಟ್ಟಲಾಗುವುದು. ಗುಲಾಬಿ ಹೂ ಕೊಟ್ಟು, ಸಿಹಿ ನೀಡಿ ಮಕ್ಕಳನ್ನು ಬರಮಾಡಿಕೊಳ್ಳಲಾಗುವುದು. ಹಾಗೂ ಸರ್ಕಾರಿ ಸೌಲಭ್ಯಗಳನ್ನು ಅಂದೇ ವಿತರಿಸಲಾಗುವುದು'.
ಬಿ.ರಾಜಶೇಖರ್-ಸಹ ಶಿಕ್ಷಕ
ಮಾದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ






