ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಡಿಸ್ಚಾರ್ಜ್ ವೇಳೆ ಜನನ ಪ್ರಮಾಣ ಪತ್ರ ವಿತರಣೆ ಕಡ್ಡಾಯ : ಡಿಸಿ ಎಂ.ಎಸ್.ದಿವಾಕರ್

ವಿಜಯನಗರ (ಹೊಸಪೇಟೆ) : ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಜನನ-ಮರಣ ನೋಂದಣಿ ಪ್ರಕ್ರಿಯೆ ವಿಳಂಬವಾಗಿ ಮಾಹಿತಿ ನೀಡುವ ಮೂಲಕ ಪ್ರಮಾಣ ಪತ್ರಕ್ಕಾಗಿ ಕುಟುಂಬಸ್ಥರನ್ನು ಅಲೆದಾಡಿಸುತ್ತಿರುವುದು ಶೋಚನೀಯ. ಇದಕ್ಕೆ ಆಯಾ ತಾಲೂಕು ವೈದ್ಯಾಧಿಕಾರಿಗಳೇ ಹೊಣೆ, ನಿರ್ಲಕ್ಷಿತ ಆಪರೇಟರ್ ಸಿಬ್ಬಂದಿಗಳನ್ನು ಕೂಡಲೇ ವಜಾಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಜಿಲ್ಲೆಯಲ್ಲಿ ಜನನ ಮತ್ತು ಮರಣ ನೊಂದಾಣಿಗಳು ಕಳೆದ 7 ತಿಂಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಜನನ 1332, ಮರಣ 852 ಒಟ್ಟು 2184 ನೊಂದಾಣಿ ವಿಳಂಬವಾಗಿವೆ. ಅದರಲ್ಲಿ ಹೊಸಪೇಟೆ 1279, ಹರಪನಹಳ್ಳಿ 251, ಹಗರಿಬೊಮ್ಮನಹಳ್ಳಿ 150, ಹೂವಿನಹಡಗಲಿ 116, ಕೊಟ್ಟೂರು 110, ಕೂಡ್ಲಿಗಿ 109, ಕಮಲಾಪುರ 88, ಮರಿಯಮ್ಮನಹಳ್ಳಿ 81 ನೊಂದಾಣಿ ವಿಳಂಬವಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ 21 ದಿನದೊಳಗೆ ಜನನ, ಮರಣ ಪ್ರಮಾಣ ಪತ್ರಗಳು ನೀಡಬೇಕು. ನಿಗದಿತ ಕಾಲಾವಧಿ ಮೀರಿ ವಿಳಂಬ ಪ್ರಕ್ರಿಯೆ ಯಾಕೆ? ವಿನಾಕಾರಣ ಸರ್ವರ್ ಪ್ರಾಬ್ಲಂ ನೆಪ ಹೇಳಿ ಕುಟುಂಬಸ್ಥರನ್ನು ಅನಗತ್ಯ ಅಲೆದಾಡಿಸುತ್ತಿರುವ ಅನೇಕ ದೂರುಗಳು ಬಂದಿವೆ ಎಂದರು.
ನಿರ್ಲಕ್ಷಿತ ಕಂಪ್ಯೂಟರ್ ಆಪರೇಟರ್ಗಳಿದ್ದರೇ ಅಂತಹ ಸಿಬ್ಬಂದಿಗಳನ್ನು ಕೂಡಲೇ ವಜಾಗೊಳಿಸಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿ ಡಿಸ್ಚಾರ್ಜ್ ವೇಳೆಯಲ್ಲಿ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ವಿಳಂಬವಾಗಿದ್ದರೇ ಜಿಲ್ಲಾ ಆರೋಗ್ಯಾಧಿಕಾರಿಗಳು ಕೆಪಿಎಂಇ ಕಾಯ್ದೆಯಡಿ ಸೂಕ್ತ ಕ್ರಮ ವಹಿಸಬೇಕು. ಎಲ್ಲಾ ತಾಲೂಕಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಶೀಘ್ರವೇ ನೋಟಿಸ್ ಜಾರಿ ಮಾಡಿ ಸರ್ಕಾರದ ಮಾರ್ಗಸೂಚಿಯಂತೆ 21 ದಿನಗಳ ಬದಲಾಗಿ 21 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ನೀಡುವಂತಾಗಲಿ. ನಾನು ಖುದ್ದಾಗಿ ಆಸ್ಪತ್ರೆಗಳನ್ನು ಭೇಟಿ ನೀಡುವೆ ಪ್ರಮಾಣ ಪತ್ರಗಳ ವಿಳಂಬ ಕಂಡು ಬಂದರೆ ಆಯಾ ತಾಲೂಕು ವೈದ್ಯಾಧಿಕಾರಿಗಳೇ ಹೊಣೆ, ಮುಲಾಜಿಲ್ಲದೇ ಕ್ರಿಮಿನಲ್ ಪ್ರಕರಣ ದಾಖಲಿಸುವೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿ ವಿಳಂಬ ಕಂಡರೆ ಕೆಪಿಎಂಇ ಕಾಯ್ದೆಯಡಿ ಕನಿಷ್ಟ 10 ದಿನಗಳು ಸೇವೆ ಸ್ಥಗಿತಕ್ಕೆ ಕ್ರಮ ವಹಿಸಲಾಗುವುದು. ಮಾಹಿತಿ ಮತ್ತು ವರದಿ ನಮೂನೆಗಳಾದ ಜನನ ವರದಿ-1, ಮರಣ ವರದಿ-2 ರಲ್ಲಿ ನೀಡಿದ ಮಾಹಿತಿಯನ್ನು ಜಾಗೂರಕತೆಯಿಂದ ನೊಂದಾಯಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.
ವಿಮಾ ನೊಂದಾಣಿಯಲ್ಲಿ ಸಾಧನೆಗೆ ಪ್ರಶಂಸೆ :
ಜಿಲ್ಲೆಯಲ್ಲಿ 2025-26 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಲ್ಲಿ ಹೆಚ್ಚು ನೊಂದಾಣಿ ಆಗಿರುವುದಕ್ಕೆ ವಿಶೇಷವಾಗಿ ಕೃಷಿ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಪ್ರಶಂಸಿದರು. ಮುಂಗಾರು ಸಾಲಿನಲ್ಲಿ ಒಟ್ಟು 103495 ರೈತರು ನೊಂದಾಯಿಸಿದ್ದಾರೆ. 89561.9 ಹೆಕ್ಟರ್ ವಿಸ್ತೀರ್ಣ ಕೃಷಿ ಭೂಮಿಗೆ ವಿಮಾ ನೊಂದಾಯಿಸಲಾಗಿದೆ. ಒಟ್ಟು 52021.89 ಲಕ್ಷ ರೂಗಳ ವಿಮಾ ಮೊತ್ತ ಹಾಗೂ 1066.31 ಲಕ್ಷ ರೂ. ಗಳ ವಿಮಾ ಕಂತು ಪಾವತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ ಈ ಪ್ರಗತಿ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಶ್ಲಾಘಿಸಿದರು.
ಅಗತ್ಯ ಔಷಧಿಗಳ ಲಭ್ಯತೆ :
ಜಿಲ್ಲೆಯಲ್ಲಿ ಸುಮಾರು 18 ಜನ ಹಿಮೋಫಿಲಿಯಾ ರೋಗಿಗಳು ಇದ್ದಾರೆ. ಇವರ ಚಿಕಿತ್ಸೆಗೆ ತೊಂದರೆ ಆಗದಂತೆ ಅಗತ್ಯ ಔಷಧಿಗಳನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸಂಗ್ರಹಿಸಿಡಿ. ತಾಲೂಕು ಆಸ್ಪತ್ರೆಗಳಲ್ಲಿ ನಿತ್ಯ ಅಗತ್ಯ ಔಷಧಿಗಳ ಕೊರತೆ ಆಗದಂತೆ ನಿರ್ವಹಿಸಿ ಎಂದು ಸಲಹೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ ಷಾ ಅವರು ಮಾತನಾಡಿದರು.
ಈ ವೇಳೆ ಸಭೆಯಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ.ಪತ್ರಿಬಸಪ್ಪ, ಜಂಟಿ ಕೃಷಿ ನಿರ್ದೇಶಕ ಜಿ.ಟಿ.ಮಂಜುನಾಥ, ಉಪ ಕೃಷಿ ನಿರ್ದೇಶಕ ನಯೀಮ್ ಪಾಷಾ, ತೋಟಗಾರಿಕೆ ಉಪನಿರ್ದೇಶಕ ಪಿ.ಜಿ.ಚಿದಾನಂದಪ್ಪ, ರೇಷ್ಮೇ ಉಪನಿರ್ದೇಶಕ ವಿ.ಸುಧೀರ್, ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ.ರಾಧಿಕಾ, ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು, ತಾಪಂ ಇಒ ಗಳು, ಎಲ್ಲಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.







