ಹರಪನಹಳ್ಳಿಯಲ್ಲಿ ಎಸ್ಐಆರ್ಗೆ ವೇಗ: ಶೇ.98ರಷ್ಟು ಗಣತಿ ನಮೂನೆಗಳ ವಿತರಣೆ

ಹರಪನಹಳ್ಳಿ : ಚುನಾವಣಾ ಆಯೋಗದ ನಿರ್ದೇಶನದಂತೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಚುರುಕುಗೊಂಡಿದ್ದು, ಇದುವರೆಗೆ ಶೇ.98ರಷ್ಟು ಗಣತಿ (ಎನ್ಯುಮರೇಶನ್) ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಸುರೇಶಕುಮಾರ ತಿಳಿಸಿದ್ದಾರೆ.
ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿದ್ದು, 2,28,914 ಮತದಾರರಿದ್ದಾರೆ. ಎಲ್ಲ ಮತದಾರರಿಗೆ ಬಿಎಲ್ಒಗಳ ಮೂಲಕ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಬಿ.ವಿ. ಗಿರೀಶಬಾಬು ಮಾತನಾಡಿ, ಸಾವಿರಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ 10 ಮತಗಟ್ಟೆಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಎಸ್ಐಆರ್ ಕಾರ್ಯವನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾರರು ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಬಿಎಲ್ಒಗಳಿಗೆ ಸಲ್ಲಿಸಬೇಕು. ಬಿಎಲ್ಒಗಳು ಅವುಗಳನ್ನು ಮೊಬೈಲ್ ಆ್ಯಪ್ ಮೂಲಕ ಅಪ್ಲೋಡ್ ಮಾಡಲಿದ್ದು, ಈವರೆಗೆ ಶೇ.11.94ರಷ್ಟು ಅಪ್ಲೋಡ್ ಕಾರ್ಯ ಪೂರ್ಣಗೊಂಡಿದೆ. ನಮೂನೆ ಸಲ್ಲಿಸಿದ ಬಳಿಕ ಸ್ವೀಕೃತಿ ಪಡೆಯುವಂತೆ ಮತದಾರರಿಗೆ ಅವರು ಮನವಿ ಮಾಡಿದರು.
ಉದ್ಯೋಗಕ್ಕಾಗಿ ಬೇರೆಡೆಗೆ ತೆರಳಿರುವ ಮತದಾರರ ಮಾಹಿತಿಯನ್ನು ಪಕ್ಕದ ಮನೆಯವರ ಮೂಲಕ ಸಂಗ್ರಹಿಸಿ ದೂರವಾಣಿ ಮೂಲಕ ಸಂಪರ್ಕಿಸಲಾಗುತ್ತಿದೆ. ಅಂತಹ ಮತದಾರರು ಜುಲೈ 30ರೊಳಗೆ ಆಗಮಿಸಿ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಬಿಎಲ್ಒಗಳಿಗೆ ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಭೆಯಲ್ಲಿ ತಾ.ಪಂ. ಇಒ ವೈ.ಎಚ್. ಚಂದ್ರಶೇಖರ್, ಕೃಷಿ ಇಲಾಖೆ ಉಪನಿರ್ದೇಶಕ ಮಹಮ್ಮದ್ ಆಶ್ರಫ್, ಕಾಂಗ್ರೆಸ್ ಮುಖಂಡ ಪೂಜಾರ ಕೃಷ್ಣನಾಯ್ಕ್, ಬಿಜೆಪಿ ಮುಖಂಡ ಪೂರ್ಯನಾಯ್ಕ್, ಆರ್ಐ ರಾಘವೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






