ಅಧಿಕಾರಿಗಳು ಹೃದಯವಂತಿಕೆಯಿಂದ ಕರ್ತವ್ಯ ನಿರ್ವಹಿಸಿ: ಈ. ತುಕಾರಾಮ್

ವಿಜಯನಗರ (ಹೊಸಪೇಟೆ): ಆಂಧ್ರದ ಗಡಿಭಾಗದಿಂದ ಕೆಲವರು ಸಿಎಚ್ ಪೌಡರ್ ಪೂರೈಕೆ ಮಾಡುತ್ತಿದ್ದು, ಇದನ್ನು ಉಪಯೋಗಿಸಿ ಮದ್ಯ ತಯಾರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಇದರ ಸೇವನೆಯಿಂದ ಜಿಲ್ಲೆಯಲ್ಲಿ ಪ್ರಾಯದ ಯುವಕರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿವೆ ಎಂದು ಸಂಸದ ಈ.ತುಕಾರಾಮ್ ಬೇಸರ ವ್ಯಕ್ತಪಡಿಸಿದರು.
ಕೂಡ್ಲಿಗಿ ಪಟ್ಟಣದ ಶ್ರೀಮತಿಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಿಶಾ (ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವೀಚಾರಣೆ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡುವ ಅಮಿಷ ಒಡ್ಡಿ ಅಕ್ರಮವಾಗಿ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿದೇ ನಿರ್ಲಕ್ಷಿಸಿದ್ದೀರಿ ಎಂದು ಕಿಡಿಕಾರಿದರು. ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಧ್ವನಿಗೂಡಿಸಿ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಮದ್ಯ ಮಾರಾಟದ ಗುರಿ ಹೆಚ್ಚಾಗಿದ್ದಾರೆ, ಈಗಲೇ ಕೈ ಬಿಡಿ, ನಮ್ಮ ಜಿಲ್ಲೆಯಿಂದಲೇ ಅತಿ ಹೆಚ್ಚು ತೆರಿಗೆ ವಸೂಲಾತಿ ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತದೆ. ಕೂಡಲೇ ಅಬಕಾರಿ ಇಲಾಖೆ ಎಚ್ಚೆತ್ತು ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ವಹಿಸಬೇಕು ಎಂದರು. ಸಂಸದ ಈ.ತುಕಾರಾಮ್ ಪ್ರತಿಕ್ರಿಯಿಸಿ ಪೊಲೀಸ್ ಇಲಾಖೆ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಆರಂಭಿಸಿ ಸಿಹೆಚ್ ಪೌಡರ್ ರವಾನೆಗೆ ಕಡಿವಾಣ ಹಾಕುವಂತೆ ಎಸ್ಪಿ ಜಾಹ್ನವಿ ಅವರಿಗೆ ಸೂಚಿಸಿದರು. ಅಧಿಕಾರಿಗಳು ಕೆಡಿಪಿ ಮತ್ತು ದಿಶಾ ಸಭೆಯ ಮಹತ್ವ ಅರಿಯಬೇಕು. ಸಭೆಯಲ್ಲಿ ಏನೋ ಹೇಳಬೇಕಂತ ಮೈಕ್ ಹಿಡಿದುಕೊಂಡು ಏನೇನೋ ಹೇಳಬಾರದು, ಹೃದಯವಂತಿಕೆಯಿAದ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಈಚೆಗೆ ಜಾನುವಾರುಗಳಲ್ಲಿ ಗಂಟು ರೋಗ ಗಂಭೀರವಾಗಿ ಕಾಡುತ್ತಿದೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆಗೆ ಕ್ರಮ ವಹಿಸಬೇಕು. ಇಲಾಖೆಯಲ್ಲಿ ಔಷಧಿಗಳ ಕೊರತೆಯಿದ್ದರೇ ಸ್ಥಳೀಯ ಶಾಸಕರು ಮತ್ತು ಸಂಸದರ ಗಮನಕ್ಕೆ ತನ್ನಿ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.
ಎನ್ಎಚ್ 50ರಲ್ಲಿ ಅಲೂರು ಬಳಿ ಮೇಲ್ಸೇತುವೆ ಹಾಗೂ ಡಾಣಾಪುರ ಬಳಿ ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಧ್ಯಪ್ರವೇಶಿಸಿ ಕಾನಾಹೊಸಹಳ್ಳಿ ಬಳಿ ಸೇವಾ ರಸ್ತೆಯಲ್ಲಿ ಅನೇಕ ದಿನಗಳಿಂದ ಸಮಸ್ಯೆ ಉಂಟಾಗುತ್ತಿದೆ. ಆಲೂರು ಬಳಿ ಸೂಕ್ತ ಕ್ರಮಗಳಿಲ್ಲದೆ ಕೆಲಸ ಮಾಡುತ್ತಿರುವುದರಿಂದ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿವೆ. ಈಚೆಗೆ ಸ್ಥಳೀಯ ಮುಖಂಡರೊಬ್ಬರು ಅಪಘಾತದಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಚರ್ಚಿಸಲು ಹೆದ್ದಾರಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎನ್ಎಚ್ಎಐ ಅಧಿಕಾರಿ ಶೀರಿಷ್ ಮಾತನಾಡಿ, ಅಲೂರು ಬಳಿ ಮೇಲ್ಸೇತುವೆ ನಿರ್ಮಾಣದಲ್ಲಿ ಸಂಚಾರಿ ಕ್ರಮಗಳನ್ನು ಹಾಗೂ ಕಾನಾಹೊಸಹಳ್ಳಿ ಬಳಿ ಸಮಸ್ಯೆ ಪರಿಹರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕ್ಯಾಸನಕೆರೆ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡಲು ವರದಿ ನೀಡಲಾಗಿದೆ ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಹೆದ್ದಾರಿಯಲ್ಲಿ ಅಂಬ್ಯೂಲೆನ್ಸ್ ಸೇವೆ ಸೇರಿದಂತೆ ಸಹಾಯವಾಣಿಗೆ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳು ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಸಂಸದ ಈ.ತುಕಾರಾಮ್ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಹಳ್ಳ ಹಿಡಿದಿವೆ. ಬಹುತೇಕ ಕಾಮಗಾರಿಗಳು ಅಪೂರ್ಣಗೊಂಡಿವೆ. ಮಾಲವಿ ಜಲಾಶಯ, ಚಿಲವಾರ ಬಂಡಿ ಏತನೀರಾವರಿ ಕಾಮಗಾರಿ ಸೇರಿ ವಿವಿಧ ನೀರಾವರಿ ಕೆಲಸಗಳನ್ನು ಗುತ್ತಿಗೆದಾರ ಪಿಚ್ಚೇಶ್ವರ ರಾವ್ ಎಂಬಾತ ನಿರ್ವಹಿಸುತ್ತಿದ್ದಾನೆ. ಇವರ ಬಗ್ಗೆ ತನಿಖೆ ನಡೆಸಿ ಕೂಡಲೇ ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲು ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಹಾಗೂ ಆಯಾ ಯೋಜನೆಗಳ ಪರಿಕರಗಳನ್ನು ವಿತರಿಸಲಾಯಿತು. ಇದಕ್ಕೂ ಮುನ್ನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ವಿವಿಧ ಇಲಾಖೆಗಳ ಸುಮಾರು 15 ಅರ್ಜಿಗಳು ಸಲ್ಲಿಕೆಯಾಯಿತು.
ಈ ವೇಳೆ ಸಭೆಯಲ್ಲಿ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಸಹಾಯಕ ಆಯುಕ್ತ ಪಿ.ವಿವೇಕಾನಂದ, ತಹಶೀಲ್ದಾರ ನೇತ್ರಾವತಿ, ಡಿವೈಎಸ್ ಪಿ ಮಲ್ಲೇಶ್ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.







