ಸಸಿ ನೆಡುವುದು ಕೇವಲ ಒಂದು ದಿನದ ಆಚರಣೆಯಾಗದೇ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು : ನಿರ್ಮಲಾ ಸೀತಾರಾಮನ್

ವಿಜಯನಗರ(ಹೊಸಪೇಟೆ): ಸಸಿ ನೆಡುವುದು ಕೇವಲ ಒಂದು ದಿನದ ಆಚರಣೆಯಾಗದೇ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು. ಪರಿಸರ, ಪಶು-ಪಕ್ಷಿಗಳು ಹಾಗೂ ಗಿಡಮರಗಳು ಸಮೃದ್ಧವಾಗಿದ್ದರೆ ಮಾತ್ರ ಮನುಕುಲದ ಪ್ರಗತಿ ಸಾಧ್ಯ. ಇಲ್ಲವಾದರೆ ಇಡೀ ಜೀವಸಂಕುಲವೇ ನಾಶವಾಗಿ ಭೂಮಿ ಮರುಭೂಮಿಯಾಗುವ ಅಪಾಯವಿದೆ ಎಂದು ಕೇಂದ್ರ ಹಣಕಾಸು ಹಾಗೂ ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ‘ಅಮ್ಮನಿಗಾಗಿ ಒಂದು ಗಿಡ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರತಿದಿನ ಒಂದು ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದು, ಅವರ ಮಾದರಿಯನ್ನು ಎಲ್ಲರೂ ಅನುಸರಿಸಬೇಕು ಎಂದರು. ಕೃಷಿಯಿಂದ ದೂರವಾಗುತ್ತಿರುವ ಯುವಜನರನ್ನು ಮತ್ತೆ ಕೃಷಿಯತ್ತ ಸೆಳೆಯಲು ಮಲ್ಟಿ ಕ್ರಾಪಿಂಗ್ ಹಾಗೂ ಆಧುನಿಕ ಕೃಷಿ ಪದ್ಧತಿಗಳು ಅಗತ್ಯವೆಂದು ತಿಳಿಸಿದರು.
ಗುಜರಾತ್ನ ಕಚ್ ಪ್ರದೇಶದಲ್ಲಿ ಭೂಕಂಪ ದುರಂತದಲ್ಲಿ ಮೃತಪಟ್ಟ ಮಕ್ಕಳ ನೆನಪಿಗಾಗಿ ನಿರ್ಮಿಸಲಾದ ಮಿಯಾವಾಕಿ ಮಾದರಿಯ ದಟ್ಟ ಅರಣ್ಯದ ಉದಾಹರಣೆ ನೀಡಿ, ಚಿಕ್ಕಜೋಗಿಹಳ್ಳಿಯಲ್ಲೂ ಸ್ಥಳೀಯ ಹವಾಮಾನಕ್ಕೆ ಹೊಂದುವ ವೈವಿಧ್ಯಮಯ ಸಸಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನೆಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ದಟ್ಟ ಕಾಡಾಗಿ ರೂಪುಗೊಂಡು ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಹೇಳಿದರು.
ಗಿಡ ನೆಡುವ ಪ್ರತಿಯೊಂದು ಮಗುವಿನ ಹೆಸರನ್ನು ಕಲ್ಲಿನ ಫಲಕದಲ್ಲಿ ಕೆತ್ತಿಸಿ ಆಯಾ ಗಿಡದ ಬಳಿ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ಅವರು, ಈ ಯೋಜನೆ ಮುಂದಿನ ಪೀಳಿಗೆಗಳಿಗೆ ಪರಿಸರ ಜಾಗೃತಿಯ ಸಂಕೇತವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್. ಟಿ. ಶ್ರೀನಿವಾಸ್, ಚಿಕ್ಕಜೋಗಿಹಳ್ಳಿಯಲ್ಲಿ 300 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಮಾದರಿಯ ಅರಣ್ಯ ಅಭಿವೃದ್ಧಿ ಕಾರ್ಯ ಆರಂಭವಾಗಿದ್ದು, ಅದನ್ನು 1,000 ಎಕರೆಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಜೊತೆಗೆ ಕೃಷಿ ವಿಜ್ಞಾನ ಕೇಂದ್ರ, ಹುಣಸೆಹಣ್ಣು ಸಂಸ್ಕರಣಾ ಘಟಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡಿದರು.
ಪರಿಸರ ಪ್ರೇಮಿ ಆರ್.ಕೆ. ನಾಯರ್ ಮಾತನಾಡಿ, ‘ಭಾರತ ವನ’ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 1 ಲಕ್ಷ ಹಣ್ಣಿನ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು. ಮೊದಲ ಹಂತದಲ್ಲಿ 40 ಎಕರೆ ಪ್ರದೇಶದಲ್ಲಿ 15 ಸಾವಿರ ಸಸಿಗಳನ್ನು ನೆಡಲಾಗುತ್ತಿದ್ದು, ಈ ವರ್ಷದ ಅಂತ್ಯದೊಳಗೆ 50 ಸಾವಿರ ಹಾಗೂ ಮುಂದಿನ ವರ್ಷ ಮತ್ತಷ್ಟು 50 ಸಾವಿರ ಸಸಿ ನೆಟ್ಟು ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.
ಜಪಾನ್ ತಂತ್ರಜ್ಞಾನ ಆಧಾರಿತ ಮಲ್ಟಿ ಕ್ರಾಪಿಂಗ್ ವ್ಯವಸ್ಥೆಯಲ್ಲಿ ಒಂಬತ್ತು ವಿವಿಧ ತಳಿಯ ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದ್ದು, ರೈತರಿಗೆ ಹೆಚ್ಚುವರಿ ಆದಾಯದ ಜೊತೆಗೆ ಮೀನುಗಾರಿಕೆಯಂತಹ ಉಪಕಸುಬುಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದ ಈ ಯೋಜನೆ ಸಿಎಸ್ಆರ್ ನಿಧಿಯಿಂದ ಅನುಷ್ಠಾನಗೊಳ್ಳುತ್ತಿದ್ದು, ರೈತರಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಹೇಳಿದರು.
ಈ ಯೋಜನೆಯಿಂದ ರೈತರಿಗೆ ನೇರ ಆದಾಯ ಸಿಗಲಿದ್ದು, ಮುಂದಿನ ದಿನಗಳಲ್ಲಿ ಹಣ್ಣು ಸಂಸ್ಕರಣಾ ಘಟಕಗಳು ಹಾಗೂ ರಫ್ತು ವ್ಯವಸ್ಥೆ ಕಲ್ಪಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಹೊಸ ದಿಕ್ಕು ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಭಾಗವಹಿಸಿದ್ದರು. ಸುಮಾರು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಈ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೀಫ್ ಜನರಲ್ ಮ್ಯಾನೇಜರ್ ಜೂಲಿ ಸ್ಮಿತಾ ಸಿನ್ಹಾ, ಎಸ್ಟಿಎಂಸಿಎಲ್ ವ್ಯವಸ್ಥಾಪಕ ನಿರ್ದೇಶಕ ವಿಜಯರಂಜನ್ ಸಿಂಗ್, ವಿತ್ತ ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಯ್ ಮಹ್ಮದ್ ಅಲಿ ಅಕ್ರಂ ಷಾ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮಾ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.






