ಪೊಲೀಸರು ಎಂದರೆ ಭಯ ಬೇಡ, ಭರವಸೆ ಇರಲಿ: ಡಿವೈಎಸ್ಪಿ ಸಂತೋಷ ಚವ್ಹಾಣ್

ಹರಪನಹಳ್ಳಿ: ಪೊಲೀಸರು ಎಂದರೆ ಭಯ ಬೇಡ ಭರವಸೆ ಇರಲಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ಸಾರ್ವಜನಿಕರಿಗೆ ರಕ್ಷಣೆ ನೀಡುವುದು ನಮ್ಮ ಇಲಾಖೆಯ ಮುಖ್ಯ ಉದ್ದೇಶ ಎಂದು ಡಿವೈಎಸ್ಪಿ ಸಂತೋಷ ಚವ್ಹಾಣ್ ತಿಳಿಸಿದರು.
ನಗರದ ತೆಕ್ಕದಗರಡಿಕೇರಿಯ ಊರಮ್ಮನ ದೇವಸ್ಥಾನದ ಆವರಣದಲ್ಲಿ ರವಿವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೋಷಕರು ಮಕ್ಕಳನ್ನು ಪ್ರೀತಿಯಿಂದ ಪೋಷಿಸಿ ಬೆಳೆಸುವುದು ಅಷ್ಟೇ ಮುಖ್ಯವಲ್ಲ ಅವರ ಬಗ್ಗೆ ನಿಗಾವಹಿಸುವುದು ಕೂಡ ಮುಖ್ಯ, ಇತ್ತೀಚಿನ ದಿನಗಳಲ್ಲಿ ಪೋಕ್ಸೊ, ಕಳ್ಳತನ, ವಂಚನೆ, ಮೋಸ ಸೇರಿದಂತೆ ಅನೇಕ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜೊತೆ ನಿಮ್ಮ ಸಹಕಾರ ತುಂಬಾ ಮುಖ್ಯ ಎಂದರು
ಯಾವುದೇ ಅಪರಾಧ ಪ್ರಕರಣಗಳು ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ, ನಾವು ನಿಮ್ಮ ಸಹಾಯಕ್ಕೆ ದಾವಿಸುತ್ತೇವೆ, ಇತ್ತೀಚೆಗೆ ಕೆಲ ವಂಚಕರು ಪೋನ್ ಮೂಲಕ ಒಟಿಪಿ ಕೇಳಿ ಹಣವನ್ನು ದೋಚುವುದು ಸರ್ವೆ ಸಾಮಾನ್ಯವಾಗಿದೆ. ನಿಮ್ಮ ಖಾತೆ ನಂಬರನ್ನು ಯಾರಿಗೂ ನೀಡದೇ ಜೋಪಾನವಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಕುಡಿದ ಮತ್ತಿನಲ್ಲಿ ಯಾರು ವಾಹನ ಚಾಲನೆ ಮಾಡಬಾರದು, ಮಧ್ಯ, ಗಾಂಜಾ ಸೇವನೆಯಿಂದ ಮನುಷ್ಯ ನಿಯಂತ್ರಣದಲ್ಲಿರುವುದಿಲ್ಲ, ಕಾನೂನು ಬಾಹಿರ ಕೆಲಸಕ್ಕೆ ಮುಂದಾಗಬೇಡಿ ಎಂದು ಎಚ್ಚರಿಸಿದರು.
ಪಿಎಸ್ಐ ಶಂಭುಲಿಂಗ ಸಿ.ಹಿರೇಮಠ ಮಾತನಾಡಿ, ಮನೆಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ನಗರದ 13 ಜನ ಒಂಟಿ ವೃದ್ಧರನ್ನು ಗುರುತಿಸಿ ಅವರಿಗೆ ಪೋಲಿಸ್ ಇಲಾಖೆ ವತಿಯಿಂದ ರಕ್ಷಣೆ ನೀಡಲಾಗಿದೆ, ನಿಮ್ಮ ಭಾಗದಲ್ಲಿ ಹಿರಿಯ ಒಂಟಿ ವೃದ್ಧರಿದ್ದರೆ ನಮ್ಮ ಗಮನಕ್ಕೆ ತನ್ನಿ. ಮಹಿಳೆಯರು ಬಸ್ಸಿನಲ್ಲಿ ಸಂಚರಿಸುವಾಗ ಚಿನ್ನ ಅಭರಣಗಳ ಮೇಲೆ ನಿಗಾ ಇರಲಿ. ಕುಟುಂಬದ ಸದಸ್ಯರು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮನೆಯ ಲೋಕೇಶನ್ ಮತ್ತು ಸೆಲ್ಪಿ ಪೋಟೋ ತೆಗೆದು ನಮ್ಮ ಇಲಾಖೆ ಗಮನಕ್ಕೆ ತನ್ನಿ ನಿಮ್ಮ ಮನೆಯ ರಕ್ಷಣೆಗೆ ಮುಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಕೀಲ ಶಿರಾಜ್ವುದ್ದೀನ್, ಸುರೇಶ್ ಮಂಡಕ್ಕಿ ದ್ಯಾಮಜ್ಜಿ ದಂಡೆಪ್ಪ, ಪಿ.ಪರಶುರಾಮ, ಗಿಡ್ಡಳಿ ನಾಗರಾಜ, ಜಲಾಲಿ ಬುಡೇನ, ಸಾಹೇಬ್, ದಾದಪೀರ, ಇಸ್ಮಾಯಿಲ್, ಆರ್.ಮರಿಯಪ್ಪ ಜಿ.ಬಸವರಾಜ, ಕಮ್ಮಾರ ಅಂಜಿನಪ್ಪ, ಕವಾಸರ ನಿಜಲಿಂಗಪ್ಪ, ದಾಣಿ ನಾಗರಾಜ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.






