ಶೇಂಗಾ, ಹುಣಸೆ ಹಣ್ಣು ಉತ್ಪಾದಕ ರೈತರಿಗೆ ಸಂಸ್ಕರಣಾ ಘಟಕ ಆರ್ಥಿಕ ಬಲ ತುಂಬಲಿದೆ : ಡಿಸಿ ಎಂ.ಎಸ್.ದಿವಾಕರ್
ವಿಜಯನಗರ (ಹೊಸಪೇಟೆ) : ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಪಂ ವ್ಯಾಪ್ತಿಯ ಕಸಾಪುರದಲ್ಲಿನ ಶೇಂಗಾ, ಹುಣಸೆ ಹಣ್ಣಿನ ಸಂಸ್ಕರಣಾ ಘಟಕಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯಲ್ಲಿ ಹುಣಸೆ ಹಣ್ಣು ಮತ್ತು ಶೇಂಗಾ ಬೆಳೆ ಹೆಚ್ಚು ಬೆಳೆಯುವುದರಿಂದ ಈ ಭಾಗದ ರೈತ ಉತ್ಪಾದಕರು ತಾವು ಬೆಳೆದ ಬೆಳೆಯನ್ನು ಸಂಸ್ಕರಿಸಿ ಉಪ ಉತ್ಪನ್ನಗಳಾದ ಶೇಂಗಾ ಚಿಕ್ಕಿ, ಬಟರ್ ಪಿನಟ್ಸ್, ಸಾಲ್ಟಡ್ ಮತ್ತು ರೋಸ್ಟಡ್ ಪಿನಟ್ಸ್ ತಯಾರಿಸಿ ಆಕರ್ಷಕ ಪ್ಯಾಕಿಂಗ್ ಉತ್ಪಾದನೆ ಹಾಗೂ ಹುಣಸೆ ಹಣ್ಣು ಸಂಸ್ಕರಿಸಿ ಟಾಮರೆಂಡ್ ಪಲ್ಪ್ ಸೇರಿ ವಿವಿಧ ತಿನಿಸುಗಳನ್ನು ಉತ್ಪಾದಿಸುವ ತರಬೇತಿಯನ್ನು ಈಗಾಗಲೇ ರೈತ ಉತ್ಪಾದಕರಿಗೆ ನೀಡಲಾಗಿದೆ. ಕಸಾಪುರ ಗ್ರಾಮದಲ್ಲಿ ಒಂದು ಎಕರೆ ಜಾಗದಲ್ಲಿ ಈ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದೆ. ನಬಾರ್ಡ್ ಯೋಜನೆಯ ಸಹಯೋಗದೊಂದಿಗೆ ಶೇಂಗಾ ಮತ್ತು ಹುಣಿಸೆ ಹಣ್ಣಿನ ಸಂಸ್ಕರಣಾ ಘಟಕವನ್ನು ಅಂದಾಜು 4.50 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಗೆ ಇಲ್ಲಿಯೇ ತರಬೇತಿ ನೀಡಲು ಕ್ರಮ ವಹಿಸಲಾಗುವುದು. ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಈ ವೇಳೆ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಡಿ.ಎಂ.ವಿಜಯಕುಮಾರ್, ತಾಪಂ ಇಒ ನರಸಪ್ಪ ಸೇರಿದಂತೆ ಗ್ರಾಪಂ ಪಿಡಿಒ ಹಾಗೂ ರೈತ ಉತ್ಪಾದಕ ಸಂಘದ ಸದಸ್ಯರು ಹಾಜರಿದ್ದರು.





