Vijayanagara | ಮಳೆ ಕೊರತೆ ಹಿನ್ನೆಲೆ ಬೆಳೆ ವಿಮೆ ಮಾಡಿಸಿಕೊಳ್ಳಿ: ರೈತರಿಗೆ ಕೃಷಿ ಇಲಾಖೆಯ ಸಲಹೆ

ಹೊಸಪೇಟೆ/ವಿಜಯನಗರ : ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೊಸಪೇಟೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮನೋಹರ್ ಗೌಡ ಸಲಹೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮಳೆ ಪರಿಸ್ಥಿತಿ ಆತಂಕಕಾರಿ ಹಂತ ತಲುಪಿದೆ ಎಂದು ತಿಳಿಸಿದರು.
ಜೂನ್ ತಿಂಗಳಲ್ಲಿ ಹೊಸಪೇಟೆ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ 85 ಮಿ.ಮೀ. ಮಳೆ ದಾಖಲಾಗಬೇಕಿದ್ದರೆ, ಈ ಬಾರಿ ಕೇವಲ 19.33 ಮಿ.ಮೀ. ಮಳೆಯಾಗಿದ್ದು, ಶೇ.78ರಷ್ಟು ಮಳೆ ಕೊರತೆ ಉಂಟಾಗಿದೆ. ಜುಲೈ ತಿಂಗಳಲ್ಲಿಯೂ ಇಲ್ಲಿಯವರೆಗೆ 19.9 ಮಿ.ಮೀ. ಮಳೆ ನಿರೀಕ್ಷಿತವಾಗಿದ್ದರೂ, ಕೇವಲ 3.4 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಮಳೆ ಕೊರತೆಯಿಂದ ಬೆಳೆ ನಷ್ಟ ಸಂಭವಿಸುವ ಸಾಧ್ಯತೆ ಇರುವುದರಿಂದ ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಈ ಕುರಿತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ, ರಸಗೊಬ್ಬರ ಮಾರಾಟ ಕೇಂದ್ರಗಳು ಹಾಗೂ ಡೀಲರ್ ಅಂಗಡಿಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ವೇಳೆ "ಕೇತು ಬಚಾವು" ಅಭಿಯಾನವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಡೆಸಲಾಗುತ್ತಿದ್ದು, ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಅಲ್ಪಾವಧಿಯ ಬೆಳೆಗಳನ್ನು ಆಯ್ಕೆ ಮಾಡುವುದು, ರೋಗ ಮತ್ತು ಕೀಟ ನಿರೋಧಕ ಗುಣ ಹೊಂದಿರುವ ತಳಿಗಳನ್ನು ಬಳಸುವುದು ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆ ಎಂದು ಹೇಳಿದರು.
ಬಿತ್ತನೆ ಬೀಜ ಸಂಸ್ಕರಣೆಯಲ್ಲಿ ಪೊಟ್ಯಾಶಿಯಂ ಬಳಸುವುದು ಉತ್ತಮ. ಜುಲೈ 15ರೊಳಗೆ ಸಮರ್ಪಕ ಮಳೆಯಾದರೆ ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಯಬಹುದು. ಒಂದು ವೇಳೆ ಮಳೆ ಮತ್ತಷ್ಟು ವಿಳಂಬವಾದರೆ ಅಥವಾ ಕಡಿಮೆಯಾದರೆ ತೊಗರಿ, ಸಜ್ಜೆ, ನವಣೆ ಹಾಗೂ ರಾಗಿ ಮೊದಲಾದ ಅಲ್ಪಾವಧಿಯ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ರೈತರಿಗೆ ಸೂಚಿಸಿದರು.
ಡಿಎಪಿ ಕೊರತೆ – ಪರ್ಯಾಯ ಗೊಬ್ಬರ ಬಳಕೆಗೆ ಸಲಹೆ:
ಜಿಲ್ಲೆಯ ಮೂರು ಹೋಬಳಿಗಳಲ್ಲಿ ಸಹಕಾರಿ ಸಂಘಗಳು ಹಾಗೂ ಡೀಲರ್ಗಳ ಮೂಲಕ ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಯೂರಿಯಾ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ. ಆದರೆ ಡಿಎಪಿ ಗೊಬ್ಬರವು ಶೇ.70ರಷ್ಟು ಕಡಿಮೆ ಪ್ರಮಾಣದಲ್ಲಿ ಸರಬರಾಜಾಗಿರುವುದರಿಂದ, ರೈತರು 17:17:17, 20:20:0 ಸೇರಿದಂತೆ ಇತರೆ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಪರ್ಯಾಯವಾಗಿ ಬಳಸುವಂತೆ ಸಲಹೆ ನೀಡಲಾಗಿದೆ ಎಂದು ವಿವರಿಸಿದರು.
ಎಫ್ಐಡಿ ವ್ಯವಸ್ಥೆಯಿಂದ ದುರುಪಯೋಗಕ್ಕೆ ಕಡಿವಾಣ
ಹಿಂದಿನ ವರ್ಷಗಳಲ್ಲಿ ಗೊಬ್ಬರ ಖರೀದಿಗೆ ರೈತರು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಇದರಿಂದ ದುರುಪಯೋಗಕ್ಕೂ ಅವಕಾಶವಾಗುತ್ತಿತ್ತು. ಈಗ ಎಫ್ಐಡಿ (FID) ವ್ಯವಸ್ಥೆ ಜಾರಿಯಾಗಿರುವುದರಿಂದ ಅರ್ಹ ರೈತರಿಗೆ ಮಾತ್ರ ಗೊಬ್ಬರ ಸಮರ್ಪಕವಾಗಿ ವಿತರಿಸಲಾಗುತ್ತಿದ್ದು, ಪ್ರತಿಯೊಬ್ಬ ರೈತನಿಗೂ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದಲ್ಲೂ ನೀರಿನ ಕೊರತೆ
ಕಳೆದ ವರ್ಷ ತುಂಗಭದ್ರಾ ಜಲಾಶಯದಲ್ಲಿ ಸುಮಾರು 105 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಪ್ರಸ್ತುತ ಕೇವಲ 19–20 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಒಳಹರಿವು ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಈ ಬೆಳವಣಿಗೆ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಸರ್ಕಾರ ಕೈಗೊಳ್ಳುವ ನಿರ್ಧಾರಗಳನ್ನು ರೈತರಿಗೆ ತಕ್ಷಣ ತಲುಪಿಸುವ ಜವಾಬ್ದಾರಿಯನ್ನು ಕೃಷಿ ಇಲಾಖೆ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.
ಕೊನೆಯಲ್ಲಿ, ಕೆ-ಕಿಸಾನ್ (K-Kisan) ವ್ಯವಸ್ಥೆಯ ಮೂಲಕ ರೈತರಿಗೆ ಪಾರದರ್ಶಕವಾಗಿ ರಸಗೊಬ್ಬರ ವಿತರಣೆ ನಡೆಯುತ್ತಿದ್ದು, ಹೊಸಪೇಟೆ ತಾಲ್ಲೂಕಿನಲ್ಲಿ ಯಾವುದೇ ರೈತರಿಗೆ ಗೊಬ್ಬರದ ಕೊರತೆಯಿಂದ ತೊಂದರೆ ಉಂಟಾಗಿಲ್ಲ ಎಂದು ಮನೋಹರ್ ಗೌಡ ಸ್ಪಷ್ಟಪಡಿಸಿದರು.






