Vijayanagar | ವಸತಿ-ನಿವೇಶನ ರಹಿತರ ಪಟ್ಟಿ ಪರಿಷ್ಕರಣೆಗೆ ಜೂನ್ 30ರವರೆಗೆ ಅವಕಾಶ : ಮುಹಮ್ಮದ್ ಅಲಿ ಅಕ್ರಂ ಷಾ

ವಿಜಯನಗರ (ಹೊಸಪೇಟೆ), ಜೂನ್ 12: 2018ರ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷಾ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಅರ್ಹ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲು ಹಾಗೂ ಪಟ್ಟಿಯನ್ನು ಪರಿಷ್ಕರಿಸಲು ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಂ ಷಾ ತಿಳಿಸಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮದ ನಿರ್ದೇಶನದಂತೆ ಈ ಕಾರ್ಯವನ್ನು ಅತ್ಯಂತ ತುರ್ತಾಗಿ ಪರಿಗಣಿಸಿ ಆಂದೋಲನದ ಮಾದರಿಯಲ್ಲಿ ಕೈಗೆತ್ತಿಕೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪಟ್ಟಿಯಲ್ಲಿರುವ ಅನರ್ಹರನ್ನು ಸೂಕ್ತ ಕಾರಣಗಳೊಂದಿಗೆ ಗುರುತಿಸಿ ಕೈಬಿಡುವುದು ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಈಗಾಗಲೇ ಮನೆ ಪಡೆದಿರುವ ಫಲಾನುಭವಿಗಳ ವಸತಿ ವರ್ಷ ಮತ್ತು ಎಒ (AO) ಸಂಖ್ಯೆಯನ್ನು ನಮೂದಿಸಿ ಪಟ್ಟಿಯಿಂದ ಹೊರಗಿಡುವಂತೆ ಸೂಚಿಸಲಾಗಿದೆ.
ಈ ಹಿಂದೆ ಎರಡು ಬಾರಿ ಅವಕಾಶ ನೀಡಿದ್ದರೂ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಲಾಗಿಲ್ಲ ಎಂದು ಸಿಇಒ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೂನ್ 30ರ ನಂತರ ಪರಿಷ್ಕೃತ ಪಟ್ಟಿಯನ್ನೇ ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಅಂತಿಮ ಪಟ್ಟಿಯಲ್ಲಿ ಅನರ್ಹರನ್ನು ಉಳಿಸಿಕೊಂಡಿರುವುದು ಅಥವಾ ಅರ್ಹರನ್ನು ಕೈಬಿಟ್ಟಿರುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಎಚ್ಚರಿಕೆ ನೀಡಿದ್ದಾರೆ.






