ಸಂವಿಧಾನದ ಕುರಿತ ಆರೆಸ್ಸೆಸ್ ಹೇಳಿಕೆ "ಜನಾಂಗೀಯ ದ್ವೇಷದ ಪ್ರಚೋದನೆಯಿಂದ ಕೂಡಿದೆ": ಎ. ಕರುಣಾನಿಧಿ

ವಿಜಯನಗರ; ಜುಲೈ1: ಸಂವಿಧಾನದ ಪೀಠಿಕೆಯಲ್ಲಿರುವ ಪದಗಳಾದ ಜಾತ್ಯಾತೀತೆ ಮತ್ತು ಸಮಾಜವಾದಿ ಪದಗಳನ್ನು ತೆಗೆಯಬೇಕೆನ್ನುವ ಆರ್ ಎಸ್ ಎಸ್ ಹೇಳಿಕೆಯನ್ನು ಆಖಿಲಬಾರತ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಸಂಘ ಪರಿವಾರದ ಈ ಹೇಳಿಕೆಯು ಭಾರತದಲ್ಲಿ ಜನಾಂಗೀಯ ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಕೂಡಿದ್ದು ಭಾರತದ ಜನತೆ ಸಂಘ ಪರಿವಾರದ ಈ ಹೇಳಿಕೆಯನ್ನು ಅತ್ಯಂತ ತೀವ್ರವಾಗಿ ಖಂಡಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ ಕರೆ ನೀಡಿದೆಯೆಂದು ರಾಜ್ಯ ಸಮಿತಿ ಮುಖಂಡ ಎ. ಕರುಣಾನಿಧಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರವು ತನ್ನ ಬಚ್ಚಿಟ್ಟ ಅಜೆಂಡಾವನ್ನು ಜಾರಿಗೊಳಿಸಲು ಅಂಬೇಡ್ಕರ್ ಹೆಸರನ್ನು ಮುಂದೆ ತಂದಿರುವುದು ದಲಿತರನ್ನು ತನ್ನ ಉದ್ದೇಶಕ್ಕೆ ಬಳಸುವ ಹುನ್ನಾರವನ್ನೂ ಬಯಲುಗೊಳಿಸಿದೆ ಎಂದು ಅವರು ತಿಳಿಸಿದರಲ್ಲದೇ ಇದು ಅಂಬೇಡ್ಕರ್ ರವರಿಗೂ ಮಾಡಿದ ಅಪಚಾರವಾಗಿದೆ ಎಂದರು.
ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಜಾತ್ಯಾತೀತತೆ ಮತ್ತು ಸಮಾಜವಾದ ಶಬ್ದಗಳು ಇರಲಿಲ್ಲವೆಂದು ಹೇಳಿರುವುದು ಸಂಘಪರಿವಾರಕ್ಕೆ ಸಾತಂತ್ರ ಚಳುವಳಿಯ ಇತಿಹಾಸವೂ ಗೊತ್ತಿಲ್ಲ ಮಾತ್ರವಲ್ಲ ಸಂವಿಧಾನದ ಇತಿಹಾಸವೂ ಗೊತ್ತಿಲ್ಲ ಎಂದಿರುವ ಅವರು ಸಂವಿಧಾನ ಬರೆಯುವುದಕ್ಕೆ ಮೊದಲು ಜವಹರಲಾಲ್ ನೆಹರು ಈ ದೇಶವನ್ನು ಸ್ವಾತಂತ್ರನಂತರದಲ್ಲಿ ಯಾವ ದಿಕ್ಕಿನಲ್ಲಿ ನಡೆಸಬೇಕೆನ್ನುವ ದಿಸೆಯಲ್ಲಿ ಸಂವಿಧಾನ ಸಭೆಯಲ್ಲಿ 1946 ಡಿಸೆಂಬರ್ 13 ರಂದು ಆಲ್ವೆಕ್ಟಿವ್ ರೆಸಲೂಷನ್ ನ್ನು ಮಂಡಿಸಿ 1947 ರಲ್ಲಿ ಅದು ಅಂಗೀಕಾರವಾಗಿ ಕೊನೆಗೆ 26.11.1949 ರಲ್ಲಿ ಸಂವಿಧಾನದಲ್ಲಿ ಅದನ್ನು ಅಂಗೀಕಾರ ಮಾಡಲಾಗಿದೆ. ಪೀಠಿಕೆಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಅಂಬೇಡ್ಕರ್ ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವ ಬಾರತದ ರಾಜಕೀಯ ಆಡಳಿತದಲ್ಲಿ ಉಸಿರಾಗಿರಬೇಕು ಎಂದು ಹೇಳಿರುವ ಅವರು ತಮ್ಮ ಜೀವಮಾನದುದ್ದಕ್ಕೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಾರೆ.ಸ್ವಾತಂತ್ರ ಹೋರಾಟದಲ್ಲಿ ಜನತೆ ತಮ್ಮ ಧರ್ಮ, ಜಾತಿ, ಭಾಷೆ, ಎಲ್ಲವನ್ನೂ ಮೀರಿ ಭಾಗವಹಿಸಿದ್ದಾರೆ. ಹಾಗಾಗಿ ಜಾತ್ಯಾತೀತತೆಯಂಬುದು ಎಂಬುದು 42 ನೇಯ ತಿದ್ದುಪಡಿಯಲ್ಲಿ ಸೇರಿದ ಕೇವಲ ಪದವಲ್ಲ ಬದಲಿಗೆ ಈ ದೇಶದ ಜನರ ಉಸಿರಾಗಿದೆ. ಆದ್ದರಿಂದಲೇ ಜಾತ್ಯಾತೀತತೆಯೆಂದರೆ ಧರ್ಮರಹಿತ ಪ್ರಭುತ್ವ, ಆದರೆ ಕಾಂಗ್ರೇಸ್ ಈಪದಗಳನ್ನು 42ನೇಯ ತಿದ್ದುಪಡಿಯಲ್ಲಿ ಸೇರಿಸಿದೆ ಎಂಬ ಏಕ ಮಾತ್ರ ಕಾರಣಕ್ಕಾಗಿ ಇವುಗಳನ್ನು ತೆಗೆಯಬೇಕು ಎನ್ನುವುದು ಸಂಘ ಪರಿವಾರದ ಮೂರ್ಖತನ ಎಂದು ಅವರು ತಿಳಿಸಿದರು.
ಸಮಾಜವಾದ ಪದವನ್ನು ಈ ಹಿಂದಿನ ಸೋವಿಯತ್ ಹಿನ್ನೆಲೆಯಲ್ಲಿ ನೋಡಬಾರದು ಈಗಾಗಲೇ ಸಂವಿದಾನದ ಭಾಗ 4 ರಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಹೇಳಲಾಗಿದೆ. ಇವುಗಳಲ್ಲಿ ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತನ್ನ ಆರ್ಥಿಕ ನೀತಿಗಳನ್ನು ರೂಪಿಸಬೇಕೆನ್ನುವುದು ಅವುಗಳ ಸಾಮಾಜಿಕ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ. ಆದ್ದರಿಂದ ಸಮಾಜವಾದವೆಂದರೆ ಸಾಮಾಜಿಕ ನ್ಯಾಯದ ಹಂಚಿಕೆಯಾಗಿದೆ. ಒಟ್ಟಾರೆ ಸಂವಿಧಾನದ ಹಿನ್ನೆಲೆಯಲ್ಲಿ ಸಮಾಜವಾದ ಮತ್ತು ಜಾತ್ಯಾತೀತತೆ ಗಳನ್ನು ನೋಡಬೇಕು ಎಂದು ಅವರು ತಿಳಿಸಿದರು.
ನಂತರ ಮಾತನಾಡಿದ ಬಿ ಮಹೇಶ್ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ 368 ನೇ ಕಲಂ ಅಡಿ ಇದೆಯಾದರೂ ಸಂವಿಧಾನವನ್ನು ತೆಗೆದುಹಾಕುವ ಇಲ್ಲವೇ ರದ್ದುಗೊಳಿಸುವ ಅಧಿಕಾರ ಸಂಸತ್ತಿಗೆ ಇಲ್ಲ ಎನ್ನುವುದಕ್ಕೆ ನ್ಯಾಯಾಂಗದ ತೀರ್ಪುಗಳಿವೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಿನರವಾ ಮಿಲ್ಸ್ ಪ್ರಕರಣದಲ್ಲಿ ಸಂವಿಧಾನ ತಿದ್ದುಪಡಿ ಮಾಡುವುದೆಂದರೆ ಅದನ್ನು ನಾಶ ಪಡಿಸುವುದೆಂದರ್ಥವಲ್ಲ ಎಂದು ಹೇಳಿದೆ. ಜಾತ್ಯಾತೀತತೆ ಮತ್ತು ಸಮಾನತೆ ಅಂತರ್ ಸಂಬಂಧಿಯಾಗಿವೆ. ಸಮಾನತೆ ಸಂವಿಧಾನದ ಮೂಲರಚನೆಯಾಗಿದೆ ಆದ್ದರಿಂದ ಜಾತ್ಯಾತೀತತೆ ತೆಗೆಯವುದೆಂದರೆ ರಾಜಕೀಯ ಸಮಾನತೆಯ ನಿರಾಕರಣೆಯಾಗಿದೆ ಎಂದರು.
ಶರಣರು, ಸಂತರು, ಸೂಫಿಗಳು ಜಾತ್ಯಾತೀತ ಪರಂಪರೆಯನ್ನು ಭಾರತದಲ್ಲಿ ಹಾಸು ಹೊಕ್ಕಾಗುವಂತೆ ಮಾಡಿದ್ದಾರೆ. ಇಂತಹ ಪರಂಪರೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತೀಯತೆಯೆಂದರೆ, ಕೋಮುವಾದವಲ್ಲ, ಮತೀಯವಾದವಲ್ಲ, ಧಾರ್ಮಿಕ ದ್ವೇಷವಲ್ಲ, ಬದಲಿಗೆ ಭಾರತೀಯತೆಯೆಂದರೆ ಜಾತಿ, ಮತ, ಪಂಥ, ಭಾಷೆಗಳನ್ನು ಮೀರಿದ, ಎಲ್ಲರನ್ನೊಳಗೊಂಡ ದೇಶಾಭಿಮಾನವಾಗಿದೆ. ಇಂತಹ ಧೇಯೋದ್ದೇಶಗಳನ್ನು ಹೊಂದಿರುವ ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ರಕ್ಷಿಸಬೇಕಾಗಿದೆ ಈ ದಿಸೆಯಲ್ಲಿ ವಕೀಲರ ಒಕ್ಕೂಟವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಗೋಷ್ಠಿಯಲ್ಲಿ , AILU ಮುಖಂಡರಾದ ಕಲ್ಯಾಣಯ್ಯ, ಕೆ ಬಸವರಾಜ, ವೆಂಕಟೇಶುಲು, ಎ. ಮರಿಯಪ್ಪ, ಮೊದಲಾದವರು ಉಪಸ್ಥಿತರಿದ್ದರು.