ವಿಜಯನಗರ | ಮಗನಿಂದಲೇ ತಂದೆ-ತಾಯಿ, ಸಹೋದರಿಯ ಹತ್ಯೆ ಪ್ರಕರಣ : ಮನೆಯೊಳಗೆ ಹೂತಿದ್ದ ಮೂರು ಮೃತದೇಹಗಳು ಹೊರಕ್ಕೆ

ವಿಜಯನಗರ: ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರು ಸದಸ್ಯರ ಹತ್ಯೆ ಪ್ರಕರಣವು ಶನಿವಾರ ಮಧ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ಬಯಲಾಗಿದ್ದು, ಆರೋಪಿ ತನ್ನ ಮನೆಯೊಳಗೆ ಹೂತಿದ್ದ ಒಂದೇ ಗುಂಡಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.
ಆರೋಪಿ ಅಕ್ಷಯ್ ಕುಮಾರ್ ಮನೆಯೊಳಗೆ ಸುಮಾರು ನಾಲ್ಕಡಿ ಆಳದ ಗುಂಡಿ ತೋಡಿ, ಮೊದಲಿಗೆ ತಾಯಿಯ ಮೃತದೇಹ, ಅದರ ಮೇಲೆ ತಂಗಿಯ ಮೃತದೇಹ ಹಾಗೂ ಕೊನೆಯಲ್ಲಿ ತಂದೆಯ ಮೃತದೇಹವನ್ನು ಹಾಕಿ ಟೈಲ್ಸ್ನಿಂದ ಮುಚ್ಚಿರುವುದು ತನಿಖೆಯಿಂದ ತಿಳಿದು ಬಂದಿದೆ.
ಶನಿವಾರ ಬೆಂಗಳೂರಿನಿಂದ ಆರೋಪಿಯನ್ನು ಕರೆತಂದ ನಂತರ, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ಸಮ್ಮುಖದಲ್ಲಿ ಮಹಜರು ನಡೆಸಲಾಯಿತು. ಈ ವೇಳೆ ಮನೆಯೊಳಗೆ ಹೂತಿಟ್ಟಿದ್ದ ಮೂರು ಮೃತದೇಹಗಳು ಪತ್ತೆಯಾಗಿದ್ದು, ತಕ್ಷಣವೇ ಅವುಗಳನ್ನು ಹೊರತೆಗೆದು ಸ್ಥಳೀಯ ಕೊಟ್ಟೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಘಟನಾ ಸ್ಥಳ ಹಾಗೂ ಆಸ್ಪತ್ರೆ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.





