ವಿಜಯನಗರ | ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ವಿಜಯನಗರ : ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ಮನೆ, ಜಮೀನು ಕಳೆದುಕೊಂಡು ಪುನರ್ವಸತಿ ಪಡೆದ ರೈತರಿಗೆ ಜಮೀನು ಹಕ್ಕುಪತ್ರ ಒದಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಮರಿಯಮ್ಮನಹಳ್ಳಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಪಾದಯಾತ್ರೆ ನಡೆಸಿದರು.
ಮರಿಯಮ್ಮನಹಳ್ಳಿ ಆಂಜನೇಯ ದೇವಸ್ಥಾನದಿಂದ ಹೊರಟ ರೈತರು 18 ಕಿಮೀ ಪಾದಯಾತ್ರೆ ನಡೆಸಿದರು. ನಂದಿಬಂಡಿ, ಡಣನಾಯಕನಕೆರೆ ಗ್ರಾಮಗಳ ಬಳಿ ಅರಣ್ಯದಂಚಿನ ಪ್ರದೇಶದಲ್ಲಿ ಕಳೆದ 73 ವರ್ಷಗಳಿಂದ ಸುಮಾರು 800 ಎಕರೆ ಪ್ರದೇಶದಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಅದರೆ, ರೈತರಿಗೆ ಸಾಗುವಳಿಗಾಗಿ ಹಕ್ಕುಪತ್ರ ಒದಗಿಸಲಾಗಿಲ್ಲ. ತುಂಗಭದ್ರಾ ಜಲಾಶಯ ನಿರ್ಮಾಣದ ಹಿನ್ನೆಲೆ ಮುಳುಗಡೆ ಪ್ರದೇಶದಿಂದ ಪುನರ್ವಸತಿ ಕಲ್ಪಿಸುವ ವೇಳೆ ಸರಕಾರ ಅರಣ್ಯದಂಚಿನ ಜಮೀನು ತೋರಿಸಿತ್ತು. ಈ ಜಮೀನುಗಳಲ್ಲೇ ರೈತರು ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ, ಇದುವರೆಗೆ ಸಾಗುವಳಿ ಪತ್ರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಜಮೀನು ಸಾಗುವಳಿ ಪತ್ರ ಈ ಕೂಡಲೇ ಒದಗಿಸಬೇಕು. ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಲ್ಕು ಬಾರಿ ಮನವಿಪತ್ರ ಸಲ್ಲಿಸಲಾಗಿದೆ. ಆದರೆ, ಈಗ ಹೊಸಪೇಟೆ ತಹಸಿಲ್ ಕಚೇರಿ ಮೂಲಕ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ ನಿಂದ ಬರೀ 3 ಕಿಮೀ ಅಂತರದಲ್ಲಿರುವ ಹಿನ್ನೆಲೆ ಸಾಗುವಳಿ ಹಕ್ಕುಪತ್ರ ಕೊಡಲು ಬರುವುದಿಲ್ಲ ಎಂದು ತಿಳಿಸಲಾಗಿದೆ. ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ ಆಗಿ ಒಂಭತ್ತು ವರ್ಷಗಳಾಗಿವೆ. ನಾವು ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವುದು 73 ವರ್ಷಗಳಾಗಿವೆ. ಹೀಗಿದ್ದರೂ ಜಮೀನಿಗೆ ಹಕ್ಕುಪತ್ರ ನೀಡಲು ಹಿಂದೇಟು ಹಾಕಲಾಗುತ್ತಿದೆ. ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಿದರು.
ಈ ವೇಳೆ ರೈತ ಮುಖಂಡರಾದ ಗೋಣಿ ಬಸಪ್ಪ, ಎಂಎಲ್ ಕೆ ನಾಯ್ಡು, ಮೆಹಬೂಬ್ ಸಾಬ್, ಗಂಟೆ ಸೋಮಶೇಖರ, ಮಂಜುಳಾ ಅಕ್ಕಿ, ಇಬ್ರಾಹಿಂಸಾಬ್, ದುರ್ಗಪ್ಪ, ರವಿಕುಮಾರ, ಕೆಂಚಪ್ಪ, ಹನುಮಂತಪ್ಪ ಮತ್ತಿತರರಿದ್ದರು.







