Vijayanagara | ಗಣಿ ಬಾಧಿತರಿಗೆ 1,146 ಕೋಟಿ ರೂ. ವೆಚ್ಚದ ವಸತಿ ಯೋಜನೆ: ಗುಣಮಟ್ಟ, ಸಮಯ ಪಾಲನೆಗೆ ಡಿಸಿ ಸೂಚನೆ

ವಿಜಯನಗರ (ಹೊಸಪೇಟೆ) : ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಅಲ್ಲಿನ ನಿವಾಸಿಗಳ ಪುನಶ್ಚೇತನಕ್ಕಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್ಸಿ) ವತಿಯಿಂದ ಸುಮಾರು 1,146 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ವಿ.ಸಿ ಹಾಲ್ನಲ್ಲಿ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವಿಳಂಬ ಅಥವಾ ಸಮನ್ವಯ ಕೊರತೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ವಸತಿ ಸಂಕೀರ್ಣಗಳ ನಿರ್ಮಾಣದ ವೇಳೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕಡ್ಡಾಯವಾಗಿದ್ದು, ರಸ್ತೆ ನಿರ್ಮಾಣದ ನಂತರ ಪೈಪ್ಲೈನ್ಗಾಗಿ ಮರು ಅಗೆತ ನಡೆಯುವಂತಹ ತಪ್ಪುಗಳು ಮರುಕಳಿಸಬಾರದು ಎಂದು ಸೂಚಿಸಿದರು.
1,146 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯಾದ್ದರಿಂದ ಪ್ರತಿ ಹಂತದಲ್ಲೂ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಅಗತ್ಯವಾಗಿದೆ. ಕೇವಲ ಮನೆ ನಿರ್ಮಾಣವಲ್ಲ, ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್ ವ್ಯವಸ್ಥೆ ಪೂರ್ಣಗೊಂಡ ಬಳಿಕವೇ ಮನೆಗಳನ್ನು ಹಸ್ತಾಂತರಿಸಬೇಕು ಎಂದು ಹೇಳಿದರು.
ಒಟ್ಟು 1,183 ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಬಾರದು. ಅರ್ಹ ಗಣಿ ಬಾಧಿತ ಕುಟುಂಬಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಹಾಗೂ ಯಾರೂ ಯೋಜನೆಯಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್ ಮಾಹಿತಿ ನೀಡಿ, ಯೋಜನೆಗೆ ಸಂಬಂಧಿಸಿದ ಡಿಪಿಆರ್ ಈಗಾಗಲೇ ಸಿದ್ಧವಾಗಿ ಅನುಮೋದನೆ ದೊರೆತಿದೆ. ಜಂಬುನಾಥಹಳ್ಳಿ, ಕೆಎಂಎನ್ಐ ಕ್ಯಾಂಪ್, ಬೊಂಬೆ ಕ್ಯಾಂಪ್, ಹಂಪಿನಕಟ್ಟೆ, ಅಂಬೇಡ್ಕರ್ ನಗರ, ಕಾರಿಗನೂರು, ಕೊಟ್ರೇಶ್ವರ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗಣಿ ಬಾಧಿತ ಕುಟುಂಬಗಳಿಗೆ ನಿವೇಶನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶಿಕಾರಿ ಕ್ಯಾಂಪ್ನ ಕೆಲವು ಫಲಾನುಭವಿಗಳಿಗೆ ನಿವೇಶನ ಕೊರತೆ ಇದ್ದು, ಉಳಿದವರಿಗೆ ಕೂಡಲೇ ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಯೋಜನೆ ನಿಗದಿತ ಅವಧಿಯಲ್ಲಿ, ಗುಣಮಟ್ಟದೊಂದಿಗೆ ಪೂರ್ಣಗೊಳ್ಳಲು ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವೆಂದು ಹೇಳಿದರು.
ಈ ಯೋಜನೆಯ ಮೂಲಕ ಗಣಿ ಬಾಧಿತ ಕುಟುಂಬಗಳಿಗೆ ನೆಮ್ಮದಿಯ ಜೀವನ ಒದಗಿಸುವುದು ಆಡಳಿತದ ಮುಖ್ಯ ಉದ್ದೇಶವಾಗಿದ್ದು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿವೇಕ್, ತಹಶೀಲ್ದಾರ್ ಶೃತಿ ಎಂ, ನಗರಸಭೆ ಪೌರಾಯುಕ್ತ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






