ವಿಜಯನಗರ | ಸೆ.15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಮುಹಮ್ಮದ್ ಅಲಿ
ವಿಜಯನಗರ (ಹೊಸಪೇಟೆ) : ವಿದ್ಯಾರ್ಥಿಗಳು, ಯುವಜನತೆ ಮತ್ತು ಸಾರ್ವಜನಿಕರಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನ ಮಹತ್ವ ಅರಿಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ ಹೇಳಿದರು.
ನಗರದ ಜಿಲ್ಲಾಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು.
ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುವುದು. ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ “ನನ್ನ ಮತ ನನ್ನ ಹಕ್ಕು” ಎಂಬ ಧ್ಯೇಯವಾಕ್ಯದ ಕುರಿತು ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಚಿತ್ರಕಲಾ ಸ್ಪರ್ಧೆ : ಶಾಲಾ ಶಿಕ್ಷಣ ಇಲಾಖೆಯಿಂದ 6 ನೇ ತರಗತಿ, 7ನೇ ತರಗತಿ ಮತ್ತು 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಶಾಲಾ ಹಂತ, ತಾಲ್ಲೂಕು ಹಂತ ಮತ್ತು ಜಿಲ್ಲಾ ಹಂತದಲ್ಲಿ ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಅಭ್ಯರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು.
ಛಾಯಾಚಿತ್ರ ಸ್ಪರ್ಧೆ (ಪೋಟೋಗ್ರಾಫಿ) : ಉನ್ನತ ಶಿಕ್ಷಣ ಇಲಾಖೆಯಿಂದ ಪದವಿ ವಿದ್ಯಾರ್ಥಿಗಳಿಗೆ ಸೆ.15 ರಂದು ನಡೆಸಲಾಗುವುದು.
ಭಾಷಣ ಸ್ಪರ್ಧೆ : ಸಮಾಜ ಕಲ್ಯಾಣ ಇಲಾಖೆ, ಕ್ರೈಸ್ (KREIS) ವಿದ್ಯಾರ್ಥಿಗಳಿಗೆ ನಡೆಸಲಾಗುವುದು. ಶಾಲಾ ಹಂತ, ತಾಲ್ಲೂಕು ಹಂತ ಮತ್ತು ಜಿಲ್ಲಾ ಹಂತದಲ್ಲಿ ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಅಭ್ಯರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು.
ಈ ಮೂರು ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಅಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ರಾಜ್ಯ ಮಟ್ಟದ ಬಹುಮಾನದ ಮೊತ್ತ : ಪ್ರಥಮ ಸ್ಥಾನ : 1,00,000 ರೂ., ದ್ವಿತೀಯ ಸ್ಥಾನ : 50,000 ರೂ., ತೃತೀಯ ಸ್ಥಾನ : 25,000 ರೂ. ನೀಡಲಾಗುವುದು.
ಸೈಕಲ್ ಜಾಥಾ : ಜಿಲ್ಲಾದ್ಯಾಂತ ಸೆ.15 ರಂದು ಸೈಕಲ್ ಜಾಥಾವನ್ನು ಅಯಾ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ಬೆಳಗ್ಗೆ7 ಗಂಟೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾದಲ್ಲಿ 14 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಮ್ಮ ಸೈಕಲ್ ನೊಂದಿಗೆ ಭಾಗವಹಿಸಬಹುದಾಗಿದೆ.
ಬೈಕ್ ರ್ಯಾಲಿ : ಸೆ.14 ರಂದು, ಬೆ.9 ಗಂಟೆಗೆ ವಿಜಯನಗರ ಜಿಲ್ಲೆಯಿಂದ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ 10 ಜನ ನುರಿತ ಬೈಕ್ ಸವಾರರನ್ನು ಭಾರತ ಧ್ವಜ ಹಾಗೂ ನಮ್ಮ ಜಿಲ್ಲೆಯ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಧ್ವಜದೊಂದಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಈ ವೇಳೆ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ತಹಶೀಲ್ದಾರ ಎಂ.ಶೃತಿ, ಡಿಡಿಪಿಯು ನಾಗರಾಜ್ ಹವಾಲ್ದಾರ್, ಎಸ್ಟಿ ಕಲ್ಯಾಣಾಧಿಕಾರಿ ಕೆ.ರವಿಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.







