Vijayanagara | 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಮಹನೀಯರ ಶ್ರಮ ಕಾರಣ: ಇಮಾಮ್ ಸಾಹೇಬ್

ಕೊಟ್ಟೂರು (ವಿಜಯನಗರ): ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಿರಿಯ ಸಾಹಿತಿಗಳ ನಿರಂತರ ಶ್ರಮದ ಫಲವಾಗಿ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಯಿತು ಎಂದು ಕೂಡ್ಲಿಗಿ ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ಇಮಾಮ್ ಸಾಹೇಬ್ ಹಡಗಲಿ ಹೇಳಿದರು.
ಪಟ್ಟಣದ ತುಂಗಭದ್ರ ಬಿಇಡಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, 1909ರಲ್ಲಿಯೇ ಪರಿಷತ್ ಸ್ಥಾಪನೆ ಕುರಿತು ಚರ್ಚೆ ನಡೆದಿತ್ತು. 1913ರ ಪ್ರಜಾಪ್ರತಿನಿಧಿ ಸಭೆಯಲ್ಲಿ ಬಿ.ಎಂ. ಶ್ರೀ ಅವರ ಭಾಷಣದಿಂದ ಪರಿಷತ್ ಹುಟ್ಟಿಗೆ ಬಲವರ್ಧನೆ ದೊರಕಿತು. 1915ರ ಮೇ 5ರಂದು ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ, 1938ರಲ್ಲಿ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್’ ಎಂದು ಮರುನಾಮಕರಣಗೊಂಡಿತು ಎಂದು ವಿವರಿಸಿದರು.
ಪರಿಷತ್ ಸಾವಿರಾರು ಪುಸ್ತಕಗಳನ್ನು ಪ್ರಕಟಿಸಿದ್ದು, ಅದರ ಭಂಡಾರದಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಕಸಾಪಕ್ಕೆ ಕೇವಲ ಸಾಹಿತಿಗಳೇ ಅಧ್ಯಕ್ಷರಾಗಬೇಕೆಂಬುದಿಲ್ಲ; ಸಂಘಟನೆ ನಡೆಸುವ ಸಾಮರ್ಥ್ಯವಿರುವವರು ಅಧ್ಯಕ್ಷರಾಗಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ ಮಾತನಾಡಿ, ಕಚೇರಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಲಾಗುತ್ತಿದೆ. ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಜಾಗ ಗುರುತಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ರಾಜ್ಯ ಮಟ್ಟದ ಗೊಂದಲದ ಹಿನ್ನೆಲೆಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ ಎಂದು ತಿಳಿಸಿದರು.
ತುಂಗಭದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ. ಶಿವಣ್ಣ ಕನ್ನಡ ಭಾಷೆ ಉಳಿವಿಗೆ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾಲೇಜು ಪ್ರಾಚಾರ್ಯ ಎಂ. ಶ್ಯಾಮರಾಜ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಳ್ಳಿ ಅಶೋಕ್, ಜಿ.ಆರ್ ಬಸವರಾಜೇಶ್ವರಿ ಹಾಗೂ ಡಾ. ಸತೀಶ್ ಬಾಲನಗೌಡ ಅವರನ್ನು ಸನ್ಮಾನಿಸಲಾಯಿತು. ಪರಿಷತ್ ಕಾರ್ಯದರ್ಶಿ ಎಸ್. ರಾಜಣ್ಣ, ಗೌರವ ಕಾರ್ಯದರ್ಶಿ ಅರವಿಂದ ಬಸಾಪುರ, ಖಜಾಂಚಿ ಈಶ್ವರಪ್ಪ ತುರಕಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






