Vijayanagara | ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೊಟ್ಟೂರು (ವಿಜಯನಗರ): ಆಯುರ್ವೇದವು ಅಡ್ಡಪರಿಣಾಮಗಳಿಲ್ಲದ, ಶ್ರೇಷ್ಠ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಪುರಾತನ ಆಯುರ್ವೇದ ಚಿಕಿತ್ಸಾ ಪದ್ಧತಿಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ವೈದ್ಯೆ ಡಾ. ಮಮತಾ ಹೇಳಿದರು.
ಪಟ್ಟಣದ ಥಿಯಸಾಫಿಕಲ್ ಲಾಡ್ಜ್ನಲ್ಲಿ ಕೂಡ್ಲಿಗಿಯ ರಶ್ಮಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಥಿಯಸಾಫಿಕಲ್ ಲಾಡ್ಜ್ ಕಾರ್ಯದರ್ಶಿ ಜೆ.ಎಂ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರಿಗೆ ಅನುಕೂಲವಾಗುವ ಉದ್ದೇಶದಿಂದ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ರಶ್ಮಿ ಆಯುರ್ವೇದ ಮಹಾವಿದ್ಯಾಲಯದ ಡಾ. ಬಿ.ವಿ. ಕೊಟ್ರೇಶ, ಡಾ. ಟಿ. ವರುಣ್, ಡಾ. ಶ್ರೀನಿಧಿ ಕಲ್ಮಠ ಹಾಗೂ ಡಾ. ವಿಜಯಕುಮಾರ ಚಿಕಿತ್ಸೆ ನೀಡಿದರು. ಬಳಿಕ ವೈದ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಥಿಯಸಾಫಿಕಲ್ ಲಾಡ್ಜ್ ಅಧ್ಯಕ್ಷ ಮೈದೂರು ಶಂಕ್ರಣ್ಣ, ಸೇವಾ ವಿಭಾಗದ ಅಧ್ಯಕ್ಷ ಬಿ. ಹನುಮಂತಪ್ಪ, ಟಿ. ಕೊಟ್ರೇಶಪ್ಪ, ಜಿ. ಮಲ್ಲಿಕಾರ್ಜುನ, ಕರ್ಣಂ ಮಹಾಂತಪ್ಪ, ಶಿವಮೂರ್ತಿ, ಸಿದ್ದರಾಮಣ್ಣ, ದೇವರಮನಿ ಕರಿಯಪ್ಪ, ಜೆ. ಬಸವರಾಜ, ಎಚ್. ಪಂಪಾಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






