Vijayanagara | ಪ್ರಜಾಪ್ರಭುತ್ವದ ಕಾವಲುಗಾರ ಪತ್ರಿಕಾರಂಗ : ಎನ್.ರಾಜುಗೌಡ

ಕೊಟ್ಟೂರು (ವಿಜಯನಗರ): ಸಮಾಜದಲ್ಲಿನ ಲೋಪದೋಷಗಳನ್ನು ನಿರ್ಭೀತಿಯಾಗಿ ಬೆಳಕಿಗೆ ತಂದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಇಂದಿಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಜೆಡಿಎಸ್ ವಕ್ತಾರ ಎನ್. ರಾಜುಗೌಡ ಹೇಳಿದರು.
ಕರ್ನಾಟಕ ಪ್ರೆಸ್ ಕ್ಲಬ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸತ್ಯವನ್ನು ಬರೆದಾಗ ಪತ್ರಕರ್ತರು ಹಲ್ಲೆ ಹಾಗೂ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸವಾಲುಗಳ ನಡುವೆಯೂ ಪತ್ರಕರ್ತರು ಧೃತಿಗೆಡದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ದೊಡ್ಡರಾಮಣ್ಣ ಮಾತನಾಡಿ, ಪತ್ರಕರ್ತರು ಒಗ್ಗಟ್ಟಾಗಿದ್ದರೆ ಯಾರೂ ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಕ್ಕೆ ಸಾಧ್ಯವಿಲ್ಲ. ರಾಜಕಾರಣಿಗಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರುವ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ ಮಾತನಾಡಿ, ಪತ್ರಿಕೋದ್ಯಮವು ಕೇವಲ ಸುದ್ದಿಯನ್ನು ನೀಡುವ ವೃತ್ತಿಯಲ್ಲ. ಅದು ಸಮಾಜದ ಹೊಣೆಗಾರಿಕೆಯಾಗಿದೆ. ಡಿಜಿಟಲ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಪರಿಶೀಲಿತ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ವಿ.ಟಿ.ಎಸ್. ತಿಪ್ಪೇಸ್ವಾಮಿ ವೆಂಕಟೇಶ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆ ಮತ್ತು ಅವೈಜ್ಞಾನಿಕ ಮಾಹಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಮುದ್ರಣ ಮಾಧ್ಯಮ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಪತ್ರಿಕಾ ಭವನದ ಕಚೇರಿಗೆ ಪ್ರತಿ ತಿಂಗಳು ಬಾಡಿಗೆ ನೀಡುವುದಾಗಿ ಇದೇ ವೇಳೆ ಘೋಷಿಸಿದರು.
ಚಾಣುಕೋಟಿ ಮಠ ಹಾಗೂ ಡೋಣೂರು ಮಠದ ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, “ಖಡ್ಗಕ್ಕಿಂತ ಲೇಖನಿ ಹರಿತ” ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ. ಪತ್ರಕರ್ತರು ಅವಸರದಲ್ಲಿ ವಾಸ್ತವತೆ ಮತ್ತು ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ವಿಶೇಷ ಶಾಲು, ಪೇಟ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಜ್ಯೋತಿ ಮತ್ತು ಎಲ್ಲಪ್ಪ ಅವರ ಪ್ರಾರ್ಥನಾ ಗೀತೆ ಹಾಗೂ ಬಿ. ರುಕ್ಮಿಣಿ ಅವರ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಈ ಸಂದರ್ಭದಲ್ಲಿ ಕೆ. ಕೊಟ್ರೇಶ್, ಡಿ. ಸಿದ್ದಪ್ಪ, ತಗ್ಗಿನಕೇರಿ ಕೊಟ್ರೇಶ್, ಎಸ್. ಪ್ರಕಾಶ್, ಹೆಚ್. ವಿಜಯಕುಮಾರ್, ದಾದಾಪೀರ್, ಎಸ್. ಪರಶುರಾಮ್, ಸುಹೇಬ್ ವಲಿ ಕೆ., ಶಿವರಾಜ ಕನ್ನಡಿಗ, ರೇವಂತ್ ಜಂಬೂರ್, ಬಂದಾತರ ಕೊಟ್ರೇಶ್ ಸೇರಿದಂತೆ ಅನೇಕ ಗಣ್ಯರು, ಹಿರಿಯ ಪತ್ರಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






