Vijayanagara | ಇಂಧನ ದರ ಏರಿಕೆಯಿಂದ ಜನರಿಗೆ ಹೆಚ್ಚಿದ ಹೊರೆ

ಹೊಸಪೇಟೆ/ವಿಜಯನಗರ : ಅಂತರರಾಷ್ಟ್ರೀಯ ಮಟ್ಟದಲ್ಲಿ ಇರಾನ್, ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧ ಸಂಘರ್ಷದ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರತೊಡಗಿದ್ದು, ಅದರ ನೇರ ಹೊರೆ ಇದೀಗ ಸಾಮಾನ್ಯ ಜನರ ಮೇಲೇ ಬೀಳುತ್ತಿದೆ. ಇಂಧನ ದರ ಏರಿಕೆಯಿಂದ ಮಧ್ಯಮ ವರ್ಗದ ಜನರು ಹಾಗೂ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಶೇಷವಾಗಿ ಮಧ್ಯರಾತ್ರಿ ಬದಲಾವಣೆಯಾಗಬೇಕಿದ್ದ ಇಂಧನ ದರಗಳನ್ನು ಬೆಳಿಗ್ಗೆ 7 ಗಂಟೆಗೆ ಪರಿಷ್ಕರಿಸಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಈ ಹಿಂದೆ ಪೆಟ್ರೋಲ್ ದರ ಪ್ರತಿ ಲೀಟರ್ಗೆ 104.09 ರೂ. ಇದ್ದು, ಇದೀಗ 107.35 ರೂ. ಗೆ ಏರಿಕೆಯಾಗಿದೆ. ಡೀಸಲ್ ದರ 92.23 ರೂ. ನಿಂದ 95.34 ರೂ. ಗೆ ಹೆಚ್ಚಳವಾಗಿದೆ. ಇದರಿಂದ ಪೆಟ್ರೋಲ್ ದರದಲ್ಲಿ 3.26 ರೂ. ಹಾಗೂ ಡೀಸಲ್ ದರದಲ್ಲಿ 3.11 ರೂ.ರಷ್ಟು ಏರಿಕೆಯಾಗಿದೆ.
ದರ ಏರಿಕೆಯಿಂದ ದಿನನಿತ್ಯ ವಾಹನಗಳನ್ನು ಅವಲಂಬಿಸಿ ಜೀವನ ಸಾಗಿಸುವ ಮಧ್ಯಮ ವರ್ಗದ ಕುಟುಂಬಗಳು, ಕಾರ್ಮಿಕರು, ಆಟೋ ಚಾಲಕರು, ರೈತರು ಹಾಗೂ ಸಣ್ಣ ವ್ಯಾಪಾರಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈಗಾಗಲೇ ಅಡುಗೆ ಅನಿಲ ದರ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇಂಧನ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಸವಾರರು ಮಾತನಾಡಿ, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅದರ ಜೊತೆಗೆ ಪೆಟ್ರೋಲ್ ಹಾಗೂ ಡೀಸಲ್ ದರ ಹೆಚ್ಚಳ ಕುಟುಂಬ ನಿರ್ವಹಣೆಯನ್ನೇ ಕಷ್ಟಕರವಾಗಿಸಿದೆ ಎಂದು ಅಸಮಾಧಾನ ಹೊರಹಾಕಿದರು.
ಉದ್ಯೋಗ, ವ್ಯಾಪಾರ ಹಾಗೂ ಕೃಷಿ ಚಟುವಟಿಕೆಗಳಿಗೆ ವಾಹನಗಳು ಅವಿಭಾಜ್ಯವಾಗಿರುವ ಸಂದರ್ಭದಲ್ಲಿ ಇಂತಹ ನಿರಂತರ ಬೆಲೆ ಏರಿಕೆ ಜನರ ಬದುಕಿನ ಮೇಲೆಯೇ ನೇರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.
ಹೊಸಪೇಟೆ ನಗರದಲ್ಲಿ ಹಲವಾರು ವಾಹನ ಸವಾರರು ಹಾಗೂ ಸಾರ್ವಜನಿಕರು ಸರ್ಕಾರ ತಕ್ಷಣವೇ ಇಂಧನ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಜನರ ಬದುಕಿನ ಸಂಕಷ್ಟವನ್ನು ಮನಗಂಡು ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.






