vijayanagara | ತುಂಗಭದ್ರಾ ನದಿಯಲ್ಲಿ ತಾಯಿ–ಮಗಳು ನಾಪತ್ತೆ; ಮುಂದುವರಿದ ಶೋಧಕಾರ್ಯ

ಹೊಸಪೇಟೆ /ವಿಜಯನಗರ : ಪ್ರವಾಸಕ್ಕೆಂದು ಹಂಪಿಗೆ ಆಗಮಿಸಿದ್ದ ತಾಯಿ–ಮಗಳು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ಶಾಹೀನ್ (38) ಹಾಗೂ ಅವರ ಪುತ್ರಿ ಯಾಸ್ಮೀನ್ (13) ನಾಪತ್ತೆಯಾಗಿರುವ ತಾಯಿ–ಮಗಳು. ಸಂಬಂಧಿಕರೊಂದಿಗೆ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬವು ನದಿಯ ಸ್ನಾನಘಟ್ಟದ ಬಳಿ ಅಡುಗೆ ಮಾಡಿಕೊಂಡು ಬಳಿಕ ಸ್ನಾನಕ್ಕೆ ತೆರಳಿತ್ತು ಎನ್ನಲಾಗಿದೆ.
ಈ ವೇಳೆ ತಾಯಿ–ಮಗಳು ಇಬ್ಬರೂ ಕಾಲು ಜಾರಿ ತುಂಗಭದ್ರಾ ನದಿಗೆ ಬಿದ್ದು ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ನಾಪತ್ತೆಯಾದವರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.
ನದಿಯಲ್ಲಿ ನೀರಿನ ಹರಿವು ಹಾಗೂ ಆಳದ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ತೊಂದರೆ ಉಂಟಾಗಿದ್ದು, ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ತಾಯಿ–ಮಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಈ ಘಟನೆ ಹಂಪಿ ಪ್ರವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.






