Vijayanagara | ಸ್ವಚ್ಛತಾ ಕಾರ್ಮಿಕರ ವಜಾಕ್ಕೆ ತೀವ್ರ ವಿರೋಧ

ಹೊಸಪೇಟೆ/ವಿಜಯನಗರ: ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 25ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ಕೈಬಿಟ್ಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕಮಲಾಪುರದಲ್ಲಿರುವ HWHAMA ಕಚೇರಿಗೆ ಸಿಐಟಿಯು ವಿಜಯನಗರ ಜಿಲ್ಲಾ ಸಮಿತಿಯ ಸಂಚಾಲಕಿ ಕೆ.ಎಂ. ಸ್ವಪ್ನ ಹಾಗೂ ಸಹ ಸಂಚಾಲಕ ಕೆ.ಎಂ. ಸಂತೋಷ್ ಕುಮಾರ್ ನೇತೃತ್ವದಲ್ಲಿ ಕಾರ್ಮಿಕರ ನಿಯೋಗ ಭೇಟಿ ನೀಡಿ ಆಯುಕ್ತ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಅನುದಾನದ ಕೊರತೆಯನ್ನು ಕಾರಣವನ್ನಾಗಿ ತೋರಿಸಿ ಕಳೆದ ನಾಲ್ಕೈದು ದಿನಗಳಿಂದ ಕಾರ್ಮಿಕರನ್ನು ಕೆಲಸದಿಂದ ದೂರವಿಡಲಾಗಿದ್ದು, ಕಳೆದ ಮೂರು ತಿಂಗಳ ವೇತನವೂ ಬಾಕಿಯಾಗಿದೆ. ಈ ಕ್ರಮದಿಂದ ಕಾರ್ಮಿಕರ ಜೀವನ ಸಂಕಷ್ಟಕ್ಕೀಡಾಗಿದ್ದು, ತಕ್ಷಣವೇ ಮರುನೇಮಕ ಮಾಡುವುದು ಹಾಗೂ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಕಾರ್ಮಿಕರ ಕೊರತೆಯಿಂದ ಹಂಪಿ ವಿಶ್ವ ಪರಂಪರೆ ಪ್ರದೇಶದಲ್ಲಿ ಸ್ವಚ್ಛತೆ ಸಮಸ್ಯೆ ಉಂಟಾಗುತ್ತಿರುವುದು ಗಮನಾರ್ಹವಾಗಿದೆ. ಪ್ರವಾಸಿಗರ ಆಕರ್ಷಣೆಯ ಪ್ರಮುಖ ಐತಿಹಾಸಿಕ ತಾಣವಾದ ಹಂಪಿಯಲ್ಲಿ ಸ್ವಚ್ಛತೆ ಕಾಪಾಡುವುದು ಅತ್ಯಂತ ಅಗತ್ಯವಾಗಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಮುಖಂಡರು ಆಗ್ರಹಿಸಿದರು.
ಈ ವಿಷಯವನ್ನು ತಕ್ಷಣ ಪರಿಶೀಲಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ನಿಯೋಗ ಮನವಿ ಮಾಡಿದೆ.






