Vijayanagara | ಶಿಕ್ಷಕರ ದಿನಾಚರಣೆ: ಗುರುಗಳಿಗೆ ವಿದ್ಯಾರ್ಥಿಗಳಿಂದ ಗೌರವಾರ್ಪಣೆ

ವಿಜಯನಗರ/ಕೂಡ್ಲಿಗಿ: ಪಟ್ಟಣದ ವೈ.ಎಸ್.ಎಸ್. ಸಮೂಹ ಸಂಸ್ಥೆಯ ಜ್ಞಾನ ಭಾರತಿ ಆವರಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು. ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಆಡಳಿತಾಧಿಕಾರಿ ಜಿ.ಆರ್. ರಾಜು ಮಾತನಾಡಿ, ವಿದ್ಯಾರ್ಥಿಗಳ ಬದುಕಿಗೆ ಸರಿಯಾದ ದಿಕ್ಕು ತೋರಿಸುವುದು ಶಿಕ್ಷಕರ ಪ್ರಮುಖ ಕರ್ತವ್ಯ. ಉತ್ತಮ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಶಿಸ್ತು ಮತ್ತು ಸಮಯಪಾಲನೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಇಡಿ ಕಾಲೇಜಿನ ಪ್ರಾಚಾರ್ಯ ಹೆಚ್.ಎಂ. ವಿಜಯಕುಮಾರ ಮಾತನಾಡಿ, ಶಿಕ್ಷಕರು ದೈವಸ್ವರೂಪಿಗಳಾಗಿದ್ದು, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಶಿಕ್ಷಕರ ಮಾರ್ಗದರ್ಶನಕ್ಕೆ ಪರ್ಯಾಯವಿಲ್ಲ ಎಂದು ಹೇಳಿದರು.
ಬಸವರಾಜ ಕೆ. ಮಾತನಾಡಿ, ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜಯಂತಿಯನ್ನು ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುಲಾಬಿ ಹೂವು ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವ ಸಲ್ಲಿಸಿ ಶುಭಾಶಯ ಕೋರಿದರು. ಮುಖ್ಯಗುರು ಹೆಚ್.ವಿ.ಎಂ. ಮಂಜುನಾಥ, ಮೆಹಂದಿ ಭಟ್ಟ, ವಿನುತ, ಮಲೈಕಭಾನು, ರಾಘವೇಂದ್ರರೆಡ್ಡಿ ಸೇರಿದಂತೆ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






