Vijayanagara | ತಂತ್ರಜ್ಞಾನ, ವ್ಯಾಪಾರ ದೇಶದ ಅಭಿವೃದ್ಧಿಯ ಎರಡು ಕಣ್ಣುಗಳು: ಉಪಕುಲಪತಿ ಡಾ. ಮುನಿರಾಜು

ಹೊಸಪೇಟೆ/ವಿಜಯನಗರ: ತಂತ್ರಜ್ಞಾನ ಮತ್ತು ವ್ಯಾಪಾರವು ದೇಶದ ಅಭಿವೃದ್ಧಿಯ ಎರಡು ಕಣ್ಣುಗಳಾಗಿದ್ದು, ಇವುಗಳಲ್ಲಿ ಯಾವುದಾದರೂ ಒಂದು ಕುಂಠಿತಗೊಂಡರೆ ರಾಷ್ಟ್ರದ ಆರ್ಥಿಕ ಪ್ರಗತಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ಮುನಿರಾಜು ಹೇಳಿದರು.
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ “ಸಿಂಚನ–2026” ಅಂಗವಾಗಿ ಬುಧವಾರ ನಡೆದ ಪದವಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಯುವಕರು ಶ್ರಮಿಸಬೇಕೆಂದು ಕರೆ ನೀಡಿದ ಅವರು, “ಸೌಕರ್ಯಗಳ ಕೊರತೆಯಿದೆ ಎಂದು ಕೈಕಟ್ಟಿ ಕುಳಿತರೆ ಹೈದರಾಬಾದ್ ಕರ್ನಾಟಕ ಪ್ರದೇಶ ಬೆಂಗಳೂರು ಮಾದರಿಯಲ್ಲಿ ಬೆಳೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಸ್ಟಾರ್ಟ್ಅಪ್ಗಳನ್ನು ಆರಂಭಿಸುವ ಮೂಲಕ ಪ್ರದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಕಲ್ಗುಡಿ ಮಂಜುನಾಥ್ ಮಾತನಾಡಿ, “ಪದವಿ ಶಿಕ್ಷಣದ ಅಂತ್ಯವಲ್ಲ; ಅದು ಜೀವನದ ಹೊಸ ಆರಂಭ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಆತ್ಮವಿಶ್ವಾಸ ಹಾಗೂ ಪೋಷಕರಿಗೆ ಗೌರವ ನೀಡುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಪಿಡಿಐಟಿ ಪ್ರಾಂಶುಪಾಲ ಡಾ. ರೋಹಿತ್ ಯು.ಎಂ. ಸ್ವಾಗತಿಸಿ ನೂತನ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಬಿ.ಇ. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
ಎನ್ಸಿಸಿ ಪಡೆಯೊಂದಿಗೆ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ, ಅತಿಥಿಗಳ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ವಿಶೇಷವಾಗಿದ್ದವು.






